ನವದೆಹಲಿ: ಉರಿ ಮತ್ತು ಪುಲ್ವಾಮಾ ಘಟನೆಯ ನಂತರ ನಿರ್ದಿಷ್ಟ ದಾಳಿ (ಸರ್ಜಿಕಲ್ ಸ್ಟ್ರೈಕ್) ಮತ್ತು ವಾಯುದಾಳಿಗಳ ಬಳಿಕ ದೇಶದ ರಕ್ಷಣಾ ನೀತಿಯು ವಿದೇಶಿ ನೀತಿಯ ನೆರಳಿನಿಂದ ಹೊರಗಿರುವಂತೆ ಕ್ರಮವಹಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಅಮೆರಿಕ, ಇಸ್ರೇಲ್ಗೆ ಸಮಾನವಾಗಿ ರಕ್ಷಣಾ ನೀತಿ ಇರುವಂತೆ ನೋಡಿಕೊಳ್ಳಲಾಗಿದೆ. ನಿರ್ದಿಷ್ಟ ದಾಳಿ ಮತ್ತು ವಾಯುದಾಳಿಗಳು ಭಯೋತ್ಪಾದನೆ ಕೃತ್ಯಗಳಿಗೆ ಉತ್ತರವಾಗಿಯಷ್ಟೇ ಇರಲಿಲ್ಲ. ರಾಷ್ಟ್ರ ಮೊದಲು ಎಂಬ ಸರ್ಕಾರದ ನಿಲುವಿನ ಅಭಿವ್ಯಕ್ತಿಯೂ ಆಗಿತ್ತು ಎಂದು ಅವರು ಶನಿವಾರ ಇಲ್ಲಿ ‘ಎಚ್.ಟಿ ನಾಯಕತ್ವ ಶೃಂಗ’ ಕಾರ್ಯಕ್ರಮದಲ್ಲಿ ಹೇಳಿದರು.
‘ಹಿಂದೆ ಉಗ್ರರು ಬಂದು ನಮ್ಮ ಸೈನಿಕರನ್ನು ಕೊಂದು ಹೋಗಬಹುದಿತ್ತು. ಯಾವುದೇ ಪ್ರತಿರೋಧ ಇರುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ಪ್ರಧಾನಿ ಅವರು ನಮ್ಮ ಗಡಿ ಉಲ್ಲಂಘಿಸುವುದು ಸರಳವಲ್ಲ ಎಂಬುದನ್ನು ತೋರಿಸಿದರು. ನಿರ್ದಿಷ್ಟ ದಾಳಿ ಮೂಲಕ ಭಾರತ ನೀಡಿದ ತಕ್ಕ ಉತ್ತರ ಕಂಡು ಇಡೀ ಜಗತ್ತು ಆಶ್ಚರ್ಯಪಟ್ಟಿತ್ತು’ ಎಂದರು.
‘ಭಾರತ ಈ ಮೂಲಕ ಹೊಸತಕ್ಕೆ ನಾಂದಿ ಹಾಡಿತು. ನಮಗೆ ದ್ವೇಷ ಬೇಡ, ಶಾಂತಿ ಬೇಕು. ಅದೇ ವೇಳೆ ಗಡಿಯನ್ನು ರಕ್ಷಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ’ ಎಂದು ಶಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.