ADVERTISEMENT

ರಾಷ್ಟ್ರೀಯ ಭದ್ರತಾ ಕಾಯ್ದೆ: ಸಮಿತಿ ರಚನೆ

ಪಿಟಿಐ
Published 19 ಮಾರ್ಚ್ 2022, 21:53 IST
Last Updated 19 ಮಾರ್ಚ್ 2022, 21:53 IST

ನವದೆಹಲಿ: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ) ದಾಖಲಾದ ಪ್ರಕರಣಗಳ ಪರಾಮರ್ಶೆ ನಡೆಸಲು ದೆಹಲಿ ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಸಲಹಾ ಸಮಿತಿಯನ್ನು ಕೇಂದ್ರ ಗೃಹ ಸಚಿವಾಲಯ ರಚಿಸಿದೆ. 1980ರ ಕಾಯ್ದೆಯ 9ನೇ ಸೆಕ್ಷನ್ ಅಡಿಯಲ್ಲಿ ಸಲಹಾ ಸಮಿತಿ ರಚಿಸಲಾಗಿದೆ.

ನ್ಯಾಯಮೂರ್ತಿ ಯೋಗೇಶ್ ಖನ್ನಾ ಅವರು ಸಮಿತಿಯ ಮುಖ್ಯಸ್ಥರಾಗಿದ್ದಾರೆ. ನ್ಯಾಯಮೂರ್ತಿಗಳಾದ ಚಂದ್ರಧಾರಿ ಸಿಂಗ್ ಹಾಗೂ ರಜನೀಶ್ ಭಟ್ನಾಗರ್ ಅವರು ಸದಸ್ಯರು.

ಈ ಕಾಯ್ದೆಯಡಿ ವ್ಯಕ್ತಿಯೊಬ್ಬರನ್ನು ಯಾವುದೇ ಆರೋಪ ಹೊರಿಸದೆಯೂ ಒಂದು ವರ್ಷದವರೆಗೆ ಬಂಧನದಲ್ಲಿ ಇರಿಸಲು ಅವಕಾಶವಿದೆ. ವ್ಯಕ್ತಿಯೊಬ್ಬರು ದೇಶದ ಭದ್ರತೆಗೆ ಅಪಾಯಕಾರಿ ಎಂದು ಸರ್ಕಾರವು ಪರಿಗಣಿಸಿದರೆ, ಅಂತಹವನ್ನು ಬಂಧಿಸಿ ಇಡಲು ಈ ಕಾಯ್ದೆ ಅವಕಾಶ ನೀಡುತ್ತದೆ.

ADVERTISEMENT

ಈ ಕಾಯ್ದೆಯಡಿ ಬಂಧನಕ್ಕೊಳಪಟ್ಟ ವ್ಯಕ್ತಿಯು ಸಲಹಾ ಮಂಡಳಿ ಎದುರು ಮನವಿ ಮಾಡಿಕೊಳ್ಳಬಹುದು. ಆದರೆ ವಿಚಾರಣೆ ಹಂತದಲ್ಲಿ ವಕೀಲರನ್ನು ನೇಮಿಸಿಕೊಳ್ಳಲು ಅವಕಾಶ ಇರುವುದಿಲ್ಲ.

ಯಾವ ಆಧಾರದಲ್ಲಿ ಬಂಧಿಸಲಾಗಿದೆ ಎಂಬುದನ್ನು ಹಾಗೂ ಬಂಧಿತ ವ್ಯಕ್ತಿಯ ಅಹವಾಲು ಇದ್ದಲ್ಲಿ, ಅದನ್ನು ಮಂಡಳಿಯ ಎದುರು ಮೂರು ವಾರಗಳ ಒಳಗೆ ಮಂಡಿಸಬೇಕು.

ವ್ಯಕ್ತಿಯ ಬಂಧನಕ್ಕೆ ಕಾರಣಗಳು ಇದ್ದವೇ ಎಂಬುದನ್ನು ಮಂಡಳಿಯು ತನ್ನ ವರದಿಯಲ್ಲಿ ತಿಳಿಸಬೇಕು. ಒಂದು ವೇಳೆ, ಬಂಧನ ಸೂಕ್ತವಾಗಿದೆ ಎಂದು ವರದಿ ತಿಳಿಸಿದಲ್ಲಿ, ವ್ಯಕ್ತಿಯ ಬಂಧನವನ್ನು ಸರ್ಕಾರ ಖಚಿತಪಡಿಸಿ, ಬಂಧನ ಅವಧಿಯನ್ನು ಮುಂದುವರಿಸುತ್ತದೆ. ಬಂಧನಕ್ಕೆ ಸೂಕ್ತ ಕಾರಣಗಳು ಕಂಡುಬಂದಿಲ್ಲ ಎಂದು ಮಂಡಳಿ ವರದಿ ನೀಡಿದಲ್ಲಿ, ವ್ಯಕ್ತಿಯ ಬಂಧನ ಆದೇಶವನ್ನು ರದ್ದುಗೊಳಿಸಿ, ಬಿಡುಗಡೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.