ADVERTISEMENT

ಅರಣ್ಯ ಸಿಬ್ಬಂದಿಗೆ ರಾಷ್ಟ್ರಪತಿ ಪದಕ: ಸರ್ಕಾರದ ಸಮಿತಿ ಶಿಫಾರಸು

ಅರಣ್ಯ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಸುರಕ್ಷತೆ ಮತ್ತು ಸುಧಾರಣೆಗೆ ಸಲಹೆ

ಪಿಟಿಐ
Published 12 ಜುಲೈ 2022, 14:22 IST
Last Updated 12 ಜುಲೈ 2022, 14:22 IST

ನವದೆಹಲಿ: ಕರ್ತವ್ಯದಲ್ಲಿರುವಾಗಲೇ ಹುತಾತ್ಮರಾದ ಅರಣ್ಯ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಹಾಗೂ ಅವರ ಅವಲಂಬಿತರಿಗೆ ಸಮವಸ್ತ್ರಧಾರಿ ಸೇವೆಯಲ್ಲಿರುವ ಇತರರಿಗೆ ನೀಡುವಂತೆ ಸೂಕ್ತ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರದ ಸಮಿತಿಯು ಮಂಗಳವಾರ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ನಿವೃತ್ತ ಐಎಎಸ್ ಅಧಿಕಾರಿ ಕೇಶವ ಶರಣ್ ವರ್ಮಾ ಅವರ ಅಧ್ಯಕ್ಷತೆಯಲ್ಲಿನ ಸಮಿತಿಯು ಈ ಸಂಬಂಧ ಮಂಗಳವಾರ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರಿಗೆ ವರದಿ ಸಲ್ಲಿಸಿದೆ.

2020ರ ಸೆಪ್ಟೆಂಬರ್‌ನಲ್ಲಿ ‘ಅರಣ್ಯ ಮುಂಚೂಣಿ ಸಿಬ್ಬಂದಿಯ ಕೆಲಸದ ಪರಿಸ್ಥಿತಿಗಳ ಸುಧಾರಣೆ ಮತ್ತು ಬಲಪಡಿಸುವಿಕೆ’ ಸಮಿತಿರಚನೆಯಾಗಿತ್ತು.

ADVERTISEMENT

ಈ ವರದಿಯು ಕರ್ತವ್ಯದಲ್ಲಿರುವ ಅರಣ್ಯ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಸುರಕ್ಷತೆ ಮತ್ತು ಸುಧಾರಣೆಯೊಂದಿಗೆ ನಿಯಮಿತವಾಗಿ ಸಿಬ್ಬಂದಿಯ ಕೌಶಲ ವರ್ಧನೆ ಮತ್ತು ವೃತ್ತಿಪರತೆಯ ಮೇಲೆಯೂ ಗಮನ ಹರಿಸಿದೆ.

ಸಮಿತಿಯು ಆಧುನಿಕ ತಂತ್ರಜ್ಞಾನದ ಬಳಕೆಗೆ ಒತ್ತು ನೀಡಿದ್ದು, ದೂರದ ಮತ್ತು ಸವಾಲಿನ ಅರಣ್ಯ ಪ್ರದೇಶಗಳಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಇತ್ತೀಚಿನ ಗ್ಯಾಜೆಟ್‌ಗಳು ಮತ್ತು ಸಲಕರಣೆಗಳೊಂದಿಗೆ ಅರಣ್ಯ ಸಿಬ್ಬಂದಿಯನ್ನು ಸಜ್ಜುಗೊಳಿಸಬೇಕು. ಅರಣ್ಯದಲ್ಲಿ ಮುಂಚೂಣಿಯಲ್ಲಿರುವ ಸಿಬ್ಬಂದಿಗೆ ವಸತಿ, ಸಂವಹನ, ನೈರ್ಮಲ್ಯ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸೂಕ್ತ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದೂ ಸಮಿತಿಯು ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.