ನವದೆಹಲಿ: ‘ಉತ್ತರ ಪ್ರದೇಶದಲ್ಲಿ 210 ಕಿ.ಮೀ ಉದ್ದದ ರಾಮ್ ವನ್ ಗಮನ್ ಮಾರ್ಗ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿದೆ.
‘ಇದೇ ಮಾರ್ಗದ ಮೂಲಕ ಭಗವಾನ್ ರಾಮ, ಸೀತೆ ಮತ್ತು ಲಕ್ಷ್ಮಣ ಅಯೋಧ್ಯೆಯಿಂದ ವನವಾಸಕ್ಕೆ ತೆರಳಿದ್ದರು ಎಂಬ ಪ್ರತೀತಿಯಿದೆ. ಹಾಗಾಗಿ ಅಯೋಧ್ಯೆಯಿಂದ ಚಿತ್ರಕೂಟಕ್ಕೆ ಸಂಪರ್ಕ ಕಲ್ಪಿಸುವ 210 ಕಿ.ಮೀ ಉದ್ದದ ರಾಮ್ ವನ್ ಗಮನ್ ಪಥವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಮಾರ್ಗವು ಫೈಜಾಬಾದ್, ಸುಲ್ತಾನಪುರ, ಪ್ರತಾಪ್ಗಢ, ಜೇತ್ವಾರಾ, ಶರಿಂಗ್ವರ್ಪುರ, ಮಂಜನ್ಪುರ ಮತ್ತು ರಾಜ್ಪುರದ ಮೂಲಕ ಹಾದು ಹೋಗಲಿದೆ’ ಎಂದು ಸಚಿವಾಲಯವು ತಿಳಿಸಿದೆ.
ಮಧ್ಯಪ್ರದೇಶದಲ್ಲೂ ರಾಮ್ ವನ್ ಗಮನ್ ಪಥವನ್ನು ನಿರ್ಮಿಸಲು ಸಹಾಯ ಮಾಡುವಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಕಳೆದ ವರ್ಷ ಮನವಿ ಮಾಡಿದ್ದರು.
‘ಭಾರತ್ಮಾಲಾ ಪರಿಯೋಜನೆಯಡಿಯಲ್ಲಿ ₹35,000 ಕೋಟಿ ಬಂಡವಾಳದೊಂದಿಗೆ 4,080 ಕಿ.ಮೀ ನಿರ್ಮಿಸಲು ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಈ ಯೋಜನೆಯಲ್ಲಿ 121 ಕಿ.ಮೀ ರಾಮ್ ವನ್ ಗಮನ್ ಮಾರ್ಗ ವಿಸ್ತರಣೆ ಮತ್ತು ರಾಜ್ಯದಲ್ಲಿರುವ ಶಾರದಾ ಶಕ್ತಿಪೀಠದ ಕಾಮಗಾರಿಯೂ ಒಳಪಟ್ಟಿದೆ’ ಎಂದು ಗಡ್ಕರಿ ಅವರು ತಿಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.