ADVERTISEMENT

ಅಕ್ರಮ ಆಸ್ತಿ, ಭ್ರಷ್ಟಾಚಾರ, ಲಂಚ ಪಡೆದ ಆರೋಪ:15 ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 4:07 IST
Last Updated 19 ಜೂನ್ 2019, 4:07 IST
   

ನವದೆಹಲಿ: ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯ (ಸಿಬಿಐಸಿ)15 ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಮಂಗಳವಾರ ಕಡ್ಡಾಯ ನಿವೃತ್ತಿ ಮಾಡಿದೆ. ಈ ಅಧಿಕಾರಿಗಳು ಭ್ರಷ್ಟಾಚಾರ ಮತ್ತು ಲಂಚ ಪಡೆದ ಆರೋಪಗಳನ್ನು ಎದುರಿಸುತ್ತಿದ್ದರು.

ಕಡ್ಡಾಯ ನಿವೃತ್ತಿಗೊಂಡ ಅಧಿಕಾರಿಗಳು ಮುಖ್ಯ ಆಯುಕ್ತ, ಹೆಚ್ಚುವರಿ ಆಯುಕ್ತ ಹಾಗೂ ಉಪ ಆಯುಕ್ತ ಶ್ರೇಣಿಯವರಾಗಿದ್ದಾರೆ. ‘ಈ ಅಧಿಕಾರಿಗಳಿಗೆ ತಾವು ನಿವೃತ್ತಿ ಹೊಂದುವ ವೇಳೆಗೆ ಬರಬಹುದಾದ ವೇತನದ ಲೆಕ್ಕಾಚಾರದಂತೆ ಮೂರು ತಿಂಗಳ ವೇತನ ಹಾಗೂ ಭತ್ಯೆಗಳನ್ನು ನೀಡಲಾಗುವುದು’ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಅನೂಪ್‌ ಶ್ರೀವಾಸ್ತವ, ಅತುಲ್‌ ದೀಕ್ಷಿತ್‌, ಸಂಸಾರ್‌ ಚಂದ್‌, ಜಿ. ಶ್ರೀಹರ್ಷ, ಅಶೋಕ್‌ ಆರ್‌. ಮಹಿದಾ, ವೀರೇಂದ್ರಕರ್‌ ಅಗರ್ವಾಲ್‌, ಅಮರೇಶ್‌ ಜೈನ್‌, ಎಸ್‌.ಎಸ್‌. ಬಿಷ್ಟ ಹಾಗೂ ವಿನೋದ್‌ ಸಂಗ ಅವರು ಕಡ್ಡಾಯ ನಿವೃತ್ತಿಗೊಂಡವರಲ್ಲಿ ಸೇರಿದ್ದಾರೆ.

ADVERTISEMENT

ಶ್ರೀವಾಸ್ತವ ಅವರು ಸಿಬಿಐಸಿಯಲ್ಲಿ ಪ್ರಧಾನ ಎಡಿಜಿ (ಅಡಿಟ್‌) ಆಗಿದ್ದರು. ದೆಹಲಿಯ ಗೃಹ ನಿರ್ಮಾಣ ಸಂಸ್ಥೆಯೊಂದಕ್ಕೆ ಕಾನೂನು ಮೀರಿ ಇವರು ನಿರಾಕ್ಷೇಪಣಾ ಪತ್ರ ನೀಡಿದ್ದಾರೆ ಎಂಬ ಆರೋಪದ ಮೇಲೆ ಸಿಬಿಐ ಇವರ ವಿರುದ್ಧ 1996ರಲ್ಲಿ ದೂರು ದಾಖಲಿಸಿತ್ತು.

ಸುಂಕ ವಂಚನೆ ಮಾಡಿದ ಆಮದುದಾರರೊಬ್ಬರ ಅಕ್ರಮವನ್ನು ಮುಚ್ಚಿಹಾಕಲು ಅವರಿಂದ ಲಂಚ ಕೇಳಿದ್ದ ಆರೋಪದ ಮೇಲೆ 2012ರಲ್ಲಿ ಶ್ರೀವಾಸ್ತವ ವಿರುದ್ಧ ಇನ್ನೊಂದು ದೂರು ದಾಖಲಾಗಿತ್ತು. ಉಳಿದ 14 ಮಂದಿಯಲ್ಲಿ ಹೆಚ್ಚಿನವರ ವಿರುದ್ಧ ಭ್ರಷ್ಟಾಚಾರ, ಲಂಚ ಪಡೆದಿರುವುದು ಮತ್ತು ಆದಾಯ ಮೀರಿ ಆಸ್ತಿ ಹೊಂದಿರುವುದೇ ಮುಂತಾದ ದೂರುಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.