ADVERTISEMENT

ಚರ್ಚೆಯೊಂದೇ ಪರಿಹಾರ: ಪ್ರತಿಭಟನೆ ಮುಂದುವರಿಸಿರುವ ರೈತರಿಗೆ ಸರ್ಕಾರದ ಸಂದೇಶ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 3:50 IST
Last Updated 2 ಫೆಬ್ರುವರಿ 2021, 3:50 IST
ಪ್ರಾತಿನಿಧಿಕ ಚಿತ್ರ: ಪಿಟಿಐ
ಪ್ರಾತಿನಿಧಿಕ ಚಿತ್ರ: ಪಿಟಿಐ   

ನವದೆಹಲಿ: ಕೃಷಿ ಕಾಯ್ದೆಗಳನ್ನು ಹಿಂತೆಗೆತಕ್ಕೆ ಒತ್ತಾಯಿಸಿ ರೈತರು ಎರಡು ತಿಂಗಳಿಂದ ನಡೆಸುತ್ತಿರುವ ಪ್ರತಿಭಟನೆ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಬಜೆಟ್ ಮಂಡನೆ ಬಳಿಕ ಸರ್ಕಾರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ಪ್ರಸ್ತಾಪ ಇಟ್ಟಿದೆ.

ಬಜೆಟ್ ಮಂಡನೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ರೈತರ ಪ್ರತಿಭಟನೆಗೆ ಚರ್ಚೆ ಒಂದೇ ಪರಿಹಾರ. ಸರ್ಕಾರ ಚರ್ಚೆಗೆ ಸಿದ್ಧವಿದೆ. ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನವೇ ಪ್ರಧಾನಿ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಈಗಲೂ ಅವರು ಚರ್ಚೆಗೆ ಬರಬಹುದು. ರೈತರ ಯಾವುದೇ ಪ್ರಶ್ನೆಗೆ ಉತ್ತರಿಸುವ ಅವಕಾಶವನ್ನು ಕೃಷಿ ಸಚಿವರು ಎಂದೂ ನಿರಾಕರಿಸಿಲ್ಲ‘ ಎಂದು ಹೇಳಿದ್ದಾರೆ.

ಈ ಮಧ್ಯೆ, ದೆಹಲಿ ಗಡಿಯಲ್ಲಿ ರೈತ ಪ್ರತಿಭಟನೆ ಮುಂದುವರೆದಿದ್ದು, ಪಶ್ಚಿಮ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಾಲ್ಕನೇ ರೈತ ಮಹಾಪಂಚಾಯತ್ ನಡೆದಿದೆ. ಕಳೆದ ವರ್ಷ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳ ಹಿಂಪಡೆತಕ್ಕೆ ಒತ್ತಾಯಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಲು ನಿರ್ಧರಿಸಲಾಗಿದೆ.

ತಮ್ಮ ರಾಜಕೀಯ ಲಾಭಕ್ಕಾಗಿ ಕೆಲವರು ರೈತರ ಪ್ರತಿಭಟನೆಯ ಬೆಂಕಿಗೆ ಇಂಧನ ಸೇರಿಸುತ್ತಿದ್ದಾರೆ. ರೈತ ಸಂಘಗಳು ಇದನ್ನು ಅರ್ಥಮಾಡಿಕೊಳ್ಳುತ್ತವೆ ಎಂದು ಆಶಿಸುತ್ತೇನೆ ಎಂದು ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಹೇಳಿದರು. ಮಾತುಕತೆಗೆ ನಾವು ಈಗಲೂ ಸಿದ್ಧವಿದ್ದೇವೆ. ಕುಳಿತು ಮಾತನಾಡಿದರೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅವರು ಹೇಳಿದ್ದಾರೆ.

ರೈತ ಸಂಘಟನೆಗಳಾದ ಜೈ ಕಿಸಾನ್ ಆಂಡೋಲನ್, ಅಲೈಯನ್ಸ್ ಫಾರ್ ಸಸ್ಟೈನಬಲ್ & ಹೋಲಿಸ್ಟಿಕ್ ಅಗ್ರಿಕಲ್ಚರ್ (ಆಶಾ) ಮತ್ತು ರೈತು ಸ್ವರಾಜ್ಯ ವೇದಿಕಾ ಇದು ರೈತರಿಗೆ "ಶೂನ್ಯ ಬಜೆಟ್" ಎಂದು ಜಂಟಿ ಹೇಳಿಕೆಯಲ್ಲಿ ಟೀಕಿಸಿವೆ.

"ಈ ಸರ್ಕಾರವು ಕೃಷಿಗೆ ಬೆಂಬಲವನ್ನು ಹಿಂತೆಗೆದುಕೊಳ್ಳುವ ಹಾದಿಯಲ್ಲಿದೆ, ಅದನ್ನು ಬಲಪಡಿಸುತ್ತಿಲ್ಲ. ರೈತರ ಭಾರಿ ಪ್ರತಿಭಟನೆ ಮತ್ತು ಆರ್ಥಿಕ ಅವಸ್ಥೆಯ ಬಗ್ಗೆ ತೀವ್ರ ಅಸಮಾಧಾನದ ಹೊರತಾಗಿಯೂ ಸರ್ಕಾರವು ಈ ಬಜೆಟ್‌ನಲ್ಲಿ ಕೃಷಿಗೆ ಕಡಿಮೆ ಆದ್ಯತೆ ನೀಡಿದೆ" ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.