ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ಹುರಿಯತ್ ಒಕ್ಕೂಟದ ಮುಖ್ಯಸ್ಥ ಮಿರ್ವಾಯಿಜ್ ಉಮರ್ ಫಾರೂಕ್ ಅವರನ್ನು ಗೃಹ ಬಂಧನದಿಂದ ಬಿಡುಗಡೆಗೊಳಿಸುವ ನಿರ್ಧಾರವನ್ನು ಹಿಂಪಡೆದಿದ್ದಾರೆ’ ಎಂದು ಹುರಿಯತ್ ಒಕ್ಕೂಟ ತಿಳಿಸಿದೆ.
ಮಿರ್ವಾಯಿಜ್ ಫಾರೂಕ್ ಅವರ ಚಲನವಲನದ ಮೇಲಿನ ನಿರ್ಬಂಧವನ್ನು ತೆಗೆದುಹಾಕಲಾಗಿದೆ ಎಂದು ಫಾರೂಕ್ ಆಪ್ತರೊಬ್ಬರು ಗುರುವಾರ ಹೇಳಿದ್ದರು. ಆದರೆ ಈ ಬಗ್ಗೆ ಜಮ್ಮು–ಕಾಶ್ಮೀರ ಆಡಳಿತವು ಸ್ಪಷ್ಟನೆ ನೀಡಿರಲಿಲ್ಲ.
‘ಆಗಸ್ಟ್ 2019 ರಿಂದ 20 ತಿಂಗಳ ಕಾಲ ಗೃಹ ಬಂಧನದಲ್ಲಿಡಲಾದ ಮಿರ್ವಾಯಿಜ್ ಫಾರೂಕ್ ಅವರನ್ನು ಬಿಡುಗಡೆಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ಇದೀಗ ಅವರು ಈ ನಿರ್ಧಾರವನ್ನು ಹಿಂದಕ್ಕೆ ಪಡೆದಿದ್ದಾರೆ’ ಎಂದು ಹುರಿಯತ್ ವಕ್ತಾರರು ಮಾಹಿತಿ ನೀಡಿದರು.
‘ಪೊಲೀಸ್ ಅಧಿಕಾರಿಗಳು ಗುರುವಾರ ತಡರಾತ್ರಿ ಮಿರ್ವಾಯಿಜ್ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅಧಿಕಾರಿಗಳು, ಫಾರೂಕ್ ಅವರ ಗೃಹ ಬಂಧನವನ್ನು ಮುಂದುವರಿಸಲಾಗಿದೆ. ಅಲ್ಲದೆ ಅವರಿಗೆ ಶುಕ್ರವಾರದ ಪ್ರಾರ್ಥನೆಗಾಗಿ ಜಮಿಯಾ ಮಸೀದಿಗೆ ಹೋಗಲು ಅನುಮತಿಯನ್ನು ಕೂಡ ನಿರಾಕರಿಸಲಾಗಿದೆ ಎಂದು ಮಾಹಿತಿ ನೀಡಿದ್ದರು’ ಎಂದು ಅವರು ಹೇಳಿದರು.
‘ಮಿರ್ವಾಯಿಜ್ ಅವರ ಮನೆ ಮುಂದೆ ಹೆಚ್ಚುವರಿ ಪಡೆಯನ್ನು ನಿಯೋಜಿಸಲಾಗಿದೆ. ಈ ನಡೆಯನ್ನು ಹುರಿಯತ್ ಖಂಡಿಸುತ್ತದೆ. ಇತ್ತೀಚಿಗೆ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವ ನಾಯಕರು ಗೃಹ ಬಂಧನದಲ್ಲಿ ಇಲ್ಲ ಎಂದು ಸಂಸತ್ತಿಗೆ ತಿಳಿಸಿತ್ತು. ಹಾಗಿದ್ದರೆ ಮಿರ್ವಾಯಿಜ್ ಅವರನ್ನು ಯಾಕೆ ಗೃಹ ಬಂಧನದಲ್ಲಿ ಇಡಲಾಗಿದೆ’ ಎಂದು ಅವರು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.