ಪ್ರಯಾಗರಾಜ್: ಜೂನ್ 10 ರಂದು ನಡೆದ ಹಿಂಸಾಚಾರದ ಸೂತ್ರಧಾರನ ₹ 5 ಕೋಟಿ ವೆಚ್ಚದ ಮನೆಯನ್ನುಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರ (ಪಿಡಿಎ) ನೆಲಸಮಗೊಳಿಸಿರುವುದನ್ನು ವಿರೋಧಿಸಿ ಪ್ರಯಾಗರಾಜ್ನ ವಕೀಲರ ಸಂಘ ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಿದೆ.
ಜಾವೇದ್ ಅವರ ಪತ್ನಿ ಪರ್ವೀನ್ ಫಾತಿಮಾ ಮನೆ ಮಾಲೀಕರು.ಈ ಮನೆಯನ್ನು ಫಾತಿಮಾ ಅವರಿಗೆ ಪೋಷಕರು ಮದುವೆಗೆ ಮೊದಲು ನೀಡಿದ್ದರು. ಆದ್ದರಿಂದ ಅಹ್ಮದ್ ಅವರಿಗೆ ಮನೆ ಮತ್ತು ಪ್ಲಾಟ್ನ ಮೇಲೆ ಯಾವುದೇ ಮಾಲೀಕತ್ವ ಇರಲಿಲ್ಲ. ನೆಲಸಮ ಮಾಡಿರುವುದು ಕಾನೂನಿಗೆ ವಿರುದ್ಧವಾಗಿದೆ. ಇದನ್ನು ಸಮರ್ಥಿಸುವ ಸಲುವಾಗಿ ಪಿಡಿಎ ಜೂನ್ 11 ರಂದು ಮನೆ ಮೇಲೆ ನೋಟಿಸ್ ಅಂಟಿಸಿದ್ದು, ಹಿಂದಿನ ದಿನಾಂಕದ ಶೋಕಾಸ್ ನೋಟಿಸ್ ಬಗ್ಗೆ ಉಲ್ಲೇಖಿಸಿದೆ ಎಂದು ಸಂಘದ ಐವರು ವಕೀಲರು ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.
‘ಪಿಡಿಎಯಿಂದ ನಕ್ಷೆ ಮಂಜೂರಾತಿ ಪಡೆಯದೆ ಮನೆ ನಿರ್ಮಿಸಲಾಗಿದೆ. ಇದಕ್ಕಾಗಿ ಮೇ 10 ರಂದು ಅವರಿಗೆ ನೋಟಿಸ್ ನೀಡಲಾಗಿತ್ತು. ಮೇ 24 ರಂದು ಅವರ ಕಡೆಯಿಂದ ದಾಖಲೆ ಹಾಜರುಪಡಿಸಲು ತಿಳಿಸಲಾಯಿತು. ಆದರೆ ಆ ದಿನಾಂಕದಂದು ಜಾವೇದ್ ಅಥವಾ ಅವರ ವಕೀಲರು ಹಾಜರಾಗಲಿಲ್ಲ. ಮೇ 25ರಂದು ಕೆಡವಲು ಆದೇಶ ಹೊರಡಿಸಲಾಗಿದೆ ’ ಎಂದು ಪಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರವಾದಿ ಮಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ಖಂಡಿಸಿ ಜೂನ್ 10 ರಂದು ನಡೆದ ಕಲ್ಲು ತೂರಾಟದ ಸೂತ್ರಧಾರ ಜಾವೇದ್ ಅಹ್ಮದ್. ಘಟನೆಯಲ್ಲಿ ಉದ್ರಿಕ್ತ ಗುಂಪುಮೋಟಾರು ಸೈಕಲ್ ಮತ್ತು ಗಾಡಿಗಳಿಗೆ ಬೆಂಕಿ ಹಚ್ಚಿತು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.