ಬಂಧನ
ಅಹಮದಾಬಾದ್: ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಿಗೆ ಭಾರತದ ಸೇನಾ ಕಾರ್ಯ ಚಟುವಟಿಕೆಗಳ ಕುರಿತು ಸೂಕ್ಷ್ಮ ಮಾಹಿತಿ ನೀಡಿದ ಆರೋಪದಲ್ಲಿ ಗುಜರಾತ್ ಭಯೋತ್ಪಾದಕ ನಿಗ್ರಹ ಪಡೆ (ಎಟಿಎಸ್), ಕಛ್ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರೊಬ್ಬರನ್ನು ಬಂಧಿಸಿದೆ.
ಕಛ್ ಜಿಲ್ಲೆಯ ಲಖ್ಪತ್ ತಾಲ್ಲೂಕಿನ ನಿವಾಸಿ 28 ವರ್ಷದ ಸಹದೇವ್ಸಿಂಗ್ ಗೋಹಿಲ್ ಬಂಧಿತ ಆರೋಪಿ. ಈತ ಇಲ್ಲಿನ ಮಾತಾ ನೊ ಮಧ್ ಗ್ರಾಮದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದಿತಿ ಭಾರದ್ವಾಜ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡ ಪಾಕಿಸ್ತಾನಿ ಏಜೆಂಟ್, ಹಣದ ಆಮಿಷವೊಡ್ಡಿ ಗೋಹಿಲ್ನಿಂದ ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಂಡಿದ್ದಾಳೆ. ಕಛ್ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ ಮತ್ತು ಭಾರತೀಯ ನೌಕಾಪಡೆಗೆ ಸೇರಿದ ಸೌಲಭ್ಯಗಳು ಹಾಗೂ ನಿರ್ಮಾಣಗೊಳ್ಳುತ್ತಿರುವ ಹೊಸ ಸೌಲಭ್ಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ಆಮಿಷವೊಡ್ಡಲಾಗಿದೆ ಎಂದು ಎಟಿಎಸ್ ಪ್ರಕಟಣೆ ತಿಳಿಸಿದೆ.
ಗೋಹಿಲ್ 2023ರ ಜೂನ್ನಿಂದ ಕಛ್ ಜಿಲ್ಲೆಯ ವಿವಿಧೆಡೆಯಿರುವ ಬಿಎಸ್ಎಫ್ ಮತ್ತು ನೌಕಾಪಡೆಯ ಸೌಲಭ್ಯಗಳ ಫೋಟೊಗಳು ಮತ್ತು ವಿಡಿಯೊಗಳನ್ನು ಪಾಕಿಸ್ತಾನಿ ಏಜೆಂಟ್ ಜತೆ ವಾಟ್ಸ್ಆ್ಯಪ್ ಮೂಲಕ ಹಂಚಿಕೊಂಡಿದ್ದರು ಎಂದು ಎಸ್ಪಿ (ಎಟಿಎಸ್) ಸಿದ್ದಾರ್ಥ್ ಕೊರುಕೊಂಡ ಹೇಳಿದ್ದಾರೆ.
ಪಾಕಿಸ್ತಾನಿ ಏಜೆಂಟ್ 2023ರ ಜೂನ್ನಲ್ಲಿ ಗೋಹಿಲ್ ಅವರನ್ನು ವಾಟ್ಸ್ಆ್ಯಪ್ ಮೂಲಕ ಸಂಪರ್ಕಿಸಿ ಸ್ನೇಹ ಬೆಳೆಸಿದ್ದಳು. ಅವರ ವಿಶ್ವಾಸ ಗಳಿಸಿದ ಬಳಿಕ ಬಿಎಸ್ಎಫ್ ಮತ್ತು ನೌಕಾಪಡೆಯ ಕಚೇರಿಗಳು ಹಾಗೂ ಆ ಗ್ರಾಮದ ಸುತ್ತಲೂ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳ ಫೋಟೊ ಮತ್ತು ವಿಡಿಯೊಗಳನ್ನು ಕಳುಹಿಸುವಂತೆ ಕೇಳಿಕೊಂಡಿದ್ದಳು. ಗೋಹಿಲ್ ಅವುಗಳನ್ನು ವಾಟ್ಸ್ಆ್ಯಪ್ ಮೂಲಕ ಕಳುಹಿಸಿದ್ದರು. ಆಕೆ (ಏಜೆಂಟ್) ಪಾಕಿಸ್ತಾನಿ ಗೂಢಚಾರಳು ಎಂಬುದು ಗೋಹಿಲ್ಗೆ ತಿಳಿದಿತ್ತು’ ಎಂದಿದ್ದಾರೆ.
‘ಇದೇ ವರ್ಷ ಜನವರಿಯಲ್ಲಿ ಗೋಹಿಲ್ ತಮ್ಮ ಆಧಾರ್ ಕಾರ್ಡ್ ಬಳಸಿ ಸಿಮ್ ಪಡೆದುಕೊಂಡಿದ್ದು, ಒಟಿಪಿಯನ್ನು ಪಾಕಿಸ್ತಾನಿ ಏಜೆಂಟ್ ಜತೆ ಹಂಚಿಕೊಂಡಿದ್ದರು. ಆ ಮೂಲಕ ಅದೇ ಸಂಖ್ಯೆಗೆ ಲಿಂಕ್ ಆಗಿರುವ ವಾಟ್ಸ್ಆ್ಯಪ್ಅನ್ನು ಬಳಸಲು ಆಕೆಗೆ ಅವಕಾಶ ಮಾಡಿಕೊಟ್ಟಿದ್ದರು. ಮಾಹಿತಿ ಹಂಚಿದ್ದಕ್ಕೆ ಕೆಲ ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯಿಂದ ₹40 ಸಾವಿರ ಪಡೆದುಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಅವರನ್ನು ಕೆಲ ದಿನಗಳ ಹಿಂದೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.
ವಿಚಾರಣೆಯ ಬಳಿಕ ಗೋಹಿಲ್ನನ್ನು ಬಂಧಿಸಿ ಸರ್ಕಾರಿ ರಹಸ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.