ಅಹಮದಾಬಾದ್: ಗುಜರಾತಿನ ಗಾಂಧಿನಗರ ಜಿಲ್ಲೆಯ ಪಾರ್ಸಾ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ದಲಿತ ವರ, ಕುದುರೆ ಸವಾರಿ ಮಾಡುವುದನ್ನು ನಿಲ್ಲಿಸಿದ್ದ ಒಂಬತ್ತು ಆರೋಪಿಗಳಿಗೆ ಇಲ್ಲಿನ ಸೆಷೆನ್ಸ್ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
2018ರಲ್ಲಿ ಈ ಘಟನೆ ನಡೆದಿದ್ದು, ದರ್ಬಾರ್ ಸಮುದಾಯಕ್ಕೆ ಸೇರಿದ ಆರೋಪಿಗಳು, ಮದುವೆ ಮೆರವಣಿಗೆ ಪೂರ್ಣಗೊಳಿಸಲು ದಲಿತ ವರನಿಗೆ ಪೊಲೀಸರ ರಕ್ಷಣೆ ಪಡೆದುಕೊಳ್ಳುವಂತೆ ಒತ್ತಾಯಿಸಿದ್ದರು.
ಸೆಷೆನ್ಸ್ ನ್ಯಾಯಾಧೀಶರಾದ ಎಸ್.ಎನ್. ಸೋಂಲಕಿ ಅವರು, ಕ್ರಿಮಿನಲ್ ಬೆದರಿಕೆ, ಅಸಹನೆ, ಕಾನೂನುಬಾಹಿರ ಸಭೆ ಮತ್ತು ದೌರ್ಜನ್ಯ ಕಾಯ್ದೆಯ ಸೆಕ್ಷನ್ ಅಡಿಯಲ್ಲಿ 9 ಆರೋಪಿಗಳನ್ನು ತಪ್ಪಿತಸ್ಥರು ಎಂದು ಪರಿಗಣಿಸಿ, 5 ವರ್ಷಗಳ ಜೈಲುಶಿಕ್ಷೆಯ ಜತೆಗೆ ₹ 10 ಸಾವಿರ ದಂಡವನ್ನೂ ವಿಧಿಸಿದ್ದಾರೆ.
ಶಿಕ್ಷೆ ಪ್ರಕಟಿಸಿರುವುದನ್ನು ದೃಢಪಡಿಸಿರುವ ಸಾರ್ವಜನಿಕ ಅಭಿಯೋಜಕರಾದ ಪಿ.ಡಿ. ವ್ಯಾಸ್ ಅವರು, ತೀರ್ಪಿನ ಪ್ರತಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಏನಿದು ಘಟನೆ?
2018ರ ಜೂನ್ 17ರಂದು ಪಾರ್ಸಾ ಗ್ರಾಮದಲ್ಲಿ ಪ್ರಶಾಂತಿ ಸೋಲಂಕಿ ಎನ್ನುವವರು ತಮ್ಮ ಮದುವೆ ನಿಮಿತ್ತ ಸ್ಥಳೀಯವಾಗಿ ‘ವರ್ಗೋಡೋ’ ಎಂದು ಕರೆಯಲಾಗುವ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದರು. ವಧುವಿನ ಮನೆಗೆ ಹೋಗುವ ಮಾರ್ಗಮಧ್ಯೆ ದರ್ಬಾರ್ ಸಮುದಾಯದ ಜನರ ಗುಂಪೊಂದು ಈ ಮೆರವಣಿಗೆಯನ್ನು ನಿಲ್ಲಿಸಿ. ದರ್ಬಾರ್ ಸಮುದಾಯದಂಥ ಧೈರ್ಯಶಾಲಿ ಜಾತಿಯ ಜನರು ಮಾತ್ರ ಕುದುರೆ ಸವಾರಿ ಮಾಡಬಹುದು ಎಂದು ವರನಿಗೆ ತಿಳಿಸಿತ್ತು.
ನಂತರ ಪೊಲೀಸರ ರಕ್ಷಣೆಯಲ್ಲಿ ಮೆರವಣಿಗೆ ಪೂರ್ಣಗೊಂಡಿತ್ತು. ಈ ಸಂಬಂಧ ದರ್ಬಾರ್ ಸಮುದಾಯದ ಒಂಬತ್ತು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.