ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ‘ಗೂಂಡಾ ರಾಜ್ಯ’ ಚಾಲ್ತಿಯಲ್ಲಿದೆ ಎಂದು ಪಿಡಿಪಿ ಅಧ್ಯಕ್ಷೆ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸೋಮವಾರ ಆರೋಪಿಸಿದ್ದಾರೆ.
ಪಿಡಿಪಿಯ ಇಬ್ಬರು ಹಿರಿಯ ನಾಯಕರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಮುಫ್ತಿ ಅವರು ಈ ಆರೋಪ ಮಾಡಿದ್ದಾರೆ. ‘ಜಿಲ್ಲಾ ಅಭಿವೃದ್ಧಿ ಸಮಿತಿ(ಡಿಡಿಸಿ) ಚುನಾವಣೆ ಫಲಿತಾಂಶದ ಮುನ್ನಾ ದಿನ ಪಿಡಿಪಿಯ ಸರ್ತಾಜ್ ಮದ್ನಿ ಹಾಗೂ ಮನ್ಸೂರ್ ಹುಸೈನ್ ಅವರನ್ನು ಪೊಲೀಸರು ಕಾರಣಗಳಿಲ್ಲದೆ ಬಂಧಿಸಿದ್ದಾರೆ. ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ‘ಮೇಲಿಂದ ಆದೇಶ ಬಂದಿದೆ’ ಎನ್ನುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಗೂಂಡಾ ರಾಜ್ಯವಾಗಿದೆ’ ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.
2019ರ ಲೋಕಸಭಾ ಚುನಾವಣೆ ವೇಳೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಿಂದ ಸಹಾಯ ಕೇಳಿದ ಆರೋಪದಡಿ ರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್ಐಎ), ಪಿಡಿಪಿ ಯುವಘಟಕದ ಅಧ್ಯಕ್ಷ ವಹೀದ್ ಪರ್ರಾ ಅವರನ್ನು ಬಂಧಿಸಿತ್ತು. ಮೆಹಬೂಬಾ ಅವರ ಸಂಬಂಧಿಯಾಗಿರುವ ಮದ್ನಿ ಹಾಗೂ ಹುಸೈನ್ ಅವರನ್ನು ಅನಂತ್ನಾಗ್ ಬಿಜ್ಬೆಹ್ರಾ ನಗರದ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದ್ದು, ಬಂಧಿತರಿಬ್ಬರೂ ಮಾಜಿ ಶಾಸಕರಾಗಿದ್ದು, ಮೆಹಬೂಬಾ ಅವರ ಬೆಂಬಲಿಗರಾಗಿದ್ದಾರೆ.
ಯಾವ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎನ್ನುವ ವಿವರವನ್ನು ಪೊಲೀಸರು ನೀಡಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ರದ್ದುಗೊಳಿಸಿದ ಬಳಿಕ, ಮದ್ನಿ ಹಾಗೂ ಹುಸೈನ್ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್ಎ) ಅಡಿ ಬಂಧಿಸಿ, ಕಳೆದ ಜೂನ್ನಲ್ಲಷ್ಟೇ ಬಿಡುಗಡೆಗೊಳಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.