ADVERTISEMENT

ಕೋವಿಡ್‌: 12ನೇ ತರಗತಿ ಪರೀಕ್ಷೆ ರದ್ದುಪಡಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಸಂತಸ

ಪಿಟಿಐ
Published 3 ಜೂನ್ 2021, 7:56 IST
Last Updated 3 ಜೂನ್ 2021, 7:56 IST
ಸುಪ್ರೀಂ ಕೋರ್ಟ್‌ (ಪಿಟಿಐ ಚಿತ್ರ) 
ಸುಪ್ರೀಂ ಕೋರ್ಟ್‌ (ಪಿಟಿಐ ಚಿತ್ರ)    

ನವದೆಹಲಿ: ಕೇಂದ್ರ ಸರ್ಕಾರವು 12ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಿರುವುದು ಸಂತಸ ವಿಷಯವಾಗಿದೆ ಎಂದಿರುವ ಸುಪ್ರೀಂಕೋರ್ಟ್‌, ಮೌಲ್ಯಮಾಪನಕ್ಕಾಗಿ ಅಳವಡಿಸಿಕೊಳ್ಳುವ ವಸ್ತುನಿಷ್ಠ ಮಾನದಂಡಗಳ ಕುರಿತು ಎರಡು ವಾರಗಳಲ್ಲಿ ಮಾಹಿತಿ ನೀಡುವಂತೆ ಸಿಬಿಎಸ್‌ಇ ಮತ್ತು ಸಿಐಸಿಎಸ್‌ಇಗೆ ಗುರುವಾರ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರ ನ್ಯಾಯಪೀಠವು ಈ ಕುರಿತ ದಾಖಲೆಗಳನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಮತ್ತು ಸಿಐಎಸ್‌ಸಿಇ ಪರ ವಕೀಲ ಜೆ.ಕೆ.ದಾಸ್ ಅವರಿಗೆ ಸೂಚಿಸಿತು.

ಹಲವು ವಿದ್ಯಾರ್ಥಿಗಳು ಭಾರತ ಮತ್ತು ವಿದೇಶಗಳಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲಿದ್ದಾರೆ. ಹಾಗಾಗಿ ಅವರ 12ನೇ ತರಗತಿಯ ಮೌಲ್ಯಮಾಪನ ವಿಧಾನಕ್ಕೆ ಅಳವಡಿಸಿಕೊಳ್ಳುವ ವಸ್ತುನಿಷ್ಠ ಮಾನದಂಡಗಳ ದಾಖಲೆಗಳನ್ನು ಸಲ್ಲಿಸಬೇಕು. ಇದಕ್ಕಾಗಿ ಹೆಚ್ಚಿನ ಅವಧಿ ಕೊಡಲು ಆಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ADVERTISEMENT

‘ಮಂಡಳಿಯ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಕೇಳಿದ ಪರಿಹಾರದಂತೆ ಇದೂ ಅಷ್ಟೇ ಮುಖ್ಯವಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಕೋವಿಡ್‌ ಪಿಡುಗು ವ್ಯಾಪಕವಾಗಿರುವ ಕಾರಣ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನು ಕೇಂದ್ರ ಸರ್ಕಾರ ಮಂಗಳವಾರ ರದ್ದುಪಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.