ನವದೆಹಲಿ:‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸಾಪಕ್ಕೆ ಬೆಂಬಲ ಸೂಚಿಸಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್ಲಾಲ್ ಖಟ್ಟರ್ ಅವರು, ಒಂದುವೇಳೆ ಭಾರತೀಯ ಚುನಾವಣೆ ಆಯೋಗವು ಈ ಯೋಜನೆಯನ್ನು ತರುವುದಾದರೆ ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಎದುರಿಸಲು ರಾಜ್ಯ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು,‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಂಬಂಧ ಚಿಂತನೆ ನಡೆಯುತ್ತಿದೆ. ಕೇವಲ ವಿಧಾನಸಭೆ, ಲೋಕಸಭೆ ಚುನಾವಣೆಗಳನ್ನು ಮಾತ್ರವಲ್ಲ ಸ್ಥಳೀಯ ಚುನಾವಣೆಗಳನ್ನೂ ಇದರ ವ್ಯಾಪ್ತಿಗೆ ತರಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಹಲವು ಸಾಂವಿಧಾನಿಕ ಕಟ್ಟುಪಾಡುಗಳಿವೆ. ಅವುಗಳತ್ತ ಗಮನಹರಿಸದ ಹೊರತು ಏಕಕಾಲದಲ್ಲಿ ಚುನಾವಣೆ ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು.
ಒಂದೇ ಚುನಾವಣೆ ಪ್ರಸ್ತಾಪವು ದೇಶಕ್ಕೆ ಪ್ರಯೋಜನಕಾರಿಯಾಗಲಿದೆ ಎಂದ ಖಟ್ಟರ್,‘ಇದಕ್ಕಾಗಿ ಹೆಚ್ಚು ಸಮಯ ಬೇಕಾಗಿಲ್ಲ. 2024ರೊಳಗೆ ಇದನ್ನು ಜಾರಿಗೊಳಿಸಬಹುದು.ಹರಿಯಾಣದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ನಡುವೆ ಐದು ತಿಂಗಳ ಅಂತರವಿದೆ. ಚುನಾವಣಾ ಆಯೋಗವು ಸಾಂವಿಧಾನಿಕ ತಿದ್ದುಪಡಿ ತಂದು, ನಂತರ ಈ ಕಾರ್ಯವಿಧಾನವನ್ನು(ಒಂದೇ ಚುನಾವಣೆ) ಅನುಸರಿಸುವುದಾದರೆ ನಾವು ತಯಾರಾಗಿದ್ದೇವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.