ADVERTISEMENT

ಕೊಲೆ ಪ್ರಕರಣ: ಡೇರಾ ಮುಖ್ಯಸ್ಥ ಖುಲಾಸೆ

ಪಿಟಿಐ
Published 28 ಮೇ 2024, 12:56 IST
Last Updated 28 ಮೇ 2024, 12:56 IST
ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ ಬಾಬಾ ಗುರ್ಮೀತ್ ರಾಮ್ ರಹೀಂ ಸಿಂಗ್ –ಪಿಟಿಐ ಸಂಗ್ರಹ ಚಿತ್ರ
ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ ಬಾಬಾ ಗುರ್ಮೀತ್ ರಾಮ್ ರಹೀಂ ಸಿಂಗ್ –ಪಿಟಿಐ ಸಂಗ್ರಹ ಚಿತ್ರ   

ಚಂಡೀಗಢ: ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಮತ್ತು ಇತರ ನಾಲ್ವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌, 2002ರಲ್ಲಿ ನಡೆದ ಈ ಪಂಥದ ಮಾಜಿ ವ್ಯವಸ್ಥಾಪಕ ರಂಜಿತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ದೋಷಮುಕ್ತಗೊಳಿಸಿದೆ.

ತನ್ನ ಅನುಯಾಯಿಗಳ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಮ್ ರಹೀಂ ಸಿಂಗ್ ಈಗ ಜೈಲಿನಲ್ಲಿದ್ದಾನೆ. ‘ರಂಜಿತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ರಾಮ್ ರಹೀಂ ಸಿಂಗ್ ಮತ್ತು ಇತರ ನಾಲ್ವರನ್ನು ಹೈಕೋರ್ಟ್‌ ಖುಲಾಸೆಗೊಳಿಸಿದೆ’ ಎಂದು ವಕೀಲ ಜಿತೇಂದರ್ ಖುರಾನಾ ತಿಳಿಸಿದ್ದಾರೆ. ಖುರಾನಾ ಅವರು ರಾಮ್‌ ರಹೀಂ ಸಿಂಗ್ ಪರ ವಕೀಲ.

ಸಿಬಿಐ ವಿಶೇಷ ನ್ಯಾಯಾಲಯವು ರಾಮ್‌ ರಹೀಂ ಸಿಂಗ್ ಮತ್ತು ಇತರ ನಾಲ್ವರನ್ನು ಅಪರಾಧಿಗಳು ಎಂದು ಘೋಷಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಸುರೇಶ್ವರ ಠಾಕೂರ್ ಮತ್ತು ಲಲಿತ್ ಬಾತ್ರಾ ಅವರು ಇದ್ದ ವಿಭಾಗೀಯ ಪೀಠವು ಆದೇಶ ನೀಡಿದೆ ಎಂದು ಖುರಾನಾ ಮಾಹಿತಿ ನೀಡಿದ್ದಾರೆ.

ADVERTISEMENT

ಸಿಬಿಐ ವಿಶೇಷ ನ್ಯಾಯಾಲಯವು ರಾಮ್ ರಹೀಂ ಸಿಂಗ್ ಮತ್ತು ಇತರ ನಾಲ್ವರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಿತ್ತು. ರಂಜಿತ್ ಸಿಂಗ್ ಅವರನ್ನು 2002ರ ಜುಲೈ 10ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.