ಚಂಡೀಗಢ: ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಮೇ 10ರ ವರೆಗೆ ಬಂಧಿಸದಂತೆಯೂ ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳದಂತೆಯು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶನಿವಾರ ರಾತ್ರಿ ಆದೇಶಿಸಿದೆ.
ಪಂಜಾಬ್ ಪೊಲೀಸರು ಕಳೆದ ತಿಂಗಳು ದಾಖಲಿಸಿದ್ದ ಪ್ರಕರಣವೊಂದರಲ್ಲಿ ಮೊಹಾಲಿ ಕೋರ್ಟ್ ಶನಿವಾರ ಜಾರಿಗೊಳಿಸಿದ್ದ ಜಾಮೀನು ರಹಿತ ಬಂಧನ ವಾರಂಟ್ ಅನ್ನು ಪ್ರಶ್ನಿಸಿ ಬಗ್ಗಾ ಶನಿವಾರ ಮಧ್ಯರಾತ್ರಿ ಹೈಕೋರ್ಟ್ ಮೊರೆಹೋಗಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಬಗ್ಗಾ ವಿರುದ್ಧದ ಬಂಧನ ವಾರಂಟ್ಗೆ ತಡೆ ನೀಡಿತು. ಅಲ್ಲದೇ, ಮುಂದಿನ ವಿಚಾರಣೆ ವರೆಗೆ, ಅಂದರೆ ಮೇ 10ರ ವರೆಗೆ ಅವರ ವಿರುದ್ಧ ಬಲವಂತದ ಕ್ರಮವನ್ನು ತೆಗೆದುಕೊಳ್ಳದಂತೆ ಪಂಜಾಬ್ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಚಂಡೀಗಢದಲ್ಲಿರುವ ನ್ಯಾಯಮೂರ್ತಿ ಅನೂಪ್ ಚಿತ್ಕಾರ ಅವರ ನಿವಾಸದಲ್ಲಿ ಶನಿವಾರ ಮಧ್ಯರಾತ್ರಿ ಅರ್ಜಿಯ ವಿಚಾರಣೆ ನಡೆಯಿತು.
ತಮ್ಮ ವಿರುದ್ಧದ ಪ್ರಕರಣವನ್ನು ರದ್ದು ಮಾಡುವಂತೆ ಬಗ್ಗಾ ತಮ್ಮ ಮನವಿಯಲ್ಲಿ ಕೋರಿದ್ದು, ವಿಚಾರಣೆಯನ್ನು ಮೇ 10ಕ್ಕೆ ಹೈಕೋರ್ಟ್ ಮುಂದೂಡಿದೆ. ಈ ಬಗ್ಗೆ ಬಗ್ಗಾ ಪರ ವಕೀಲ ಚೇತನ್ ಮಿತ್ತಲ್ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು, ಶನಿವಾರ ಮ್ಯಾಜಿಸ್ಟ್ರೇಟ್ ರಾವ್ತೇಶ್ ಇಂದರ್ಜಿತ್ ಸಿಂಗ್ ಅವರು ಬಗ್ಗಾ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ್ದರು.
ಪ್ರಚೋದನಕಾರಿ ಹೇಳಿಕೆ, ದ್ವೇಷ ಪ್ರಚೋದನೆ, ಬೆದರಿಕೆಯೊಡ್ಡಿದ ಆರೋಪದ ಮೇಲೆ ಪಂಜಾಬ್ ಪೊಲೀಸರು ತಜಿಂದರ್ ಪಾಲ್ ಸಿಂಗ್ ಬಗ್ಗಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮೊಹಾಲಿ ನಿವಾಸಿ ಎಎಪಿ ನಾಯಕ ಸನ್ನಿ ಅಹ್ಲುವಾಲಿಯಾ ಅವರ ದೂರನ್ನು ಆಧರಿಸಿ, ಐಪಿಸಿ ಸೆಕ್ಷನ್ 153-A, 505, 505 (2), 506 ಅಡಿ ಪ್ರಕರಣ ದಾಖಲಿಸಲಾಗಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ಮಾರ್ಚ್ 30 ರಂದು ಬಿಜೆಪಿ ಯುವ ಘಟಕ ನಡೆಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಗ್ಗಾ ಅವರು ನೀಡಿದ್ದ ಹೇಳಿಕೆಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಬಗ್ಗಾ ಅವರನ್ನು ಶುಕ್ರವಾರ ಅವರ ದೆಹಲಿ ನಿವಾಸದಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಪಂಜಾಬ್ಗೆ ಕರೆದೊಯ್ಯುವಾಗ ಹರಿಯಾಣದಲ್ಲಿ ಅವರನ್ನು ತಡೆಯಲಾಗಿತ್ತು. ಅವರನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.