ಚೆನ್ನೈ: ಕೊಯಮತ್ತೂರಿನಲ್ಲಿರುವ ಈಶಾ ಪ್ರತಿಷ್ಠಾನದಲ್ಲಿ ಮಹಾಶಿವರಾತ್ರಿ ಆಚರಣೆಗೆ ಅನುಮತಿ ನೀಡದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಈಶಾ ಪ್ರತಿಷ್ಠಾನವು ಕೊಯಮತ್ತೂರಿನಲ್ಲಿ ಕೊಳಚೆ ನೀರನ್ನು ಸರಿಯಾಗಿ ಸಂಸ್ಕರಿಸುತ್ತಿಲ್ಲ, ಸರಿಯಾಗಿ ಸಂಸ್ಕರಿಸದ ಕೊಳಚೆ ನೀರನ್ನು ಅದು ಹೊರಬಿಡುತ್ತಿದೆ, ತೀವ್ರ ಪ್ರಮಾಣದಲ್ಲಿ ಶಬ್ದ ಮಾಲಿನ್ಯ ಉಂಟುಮಾಡುತ್ತಿದೆ ಎಂಬ ಆರೋಪಗಳ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂಬ ಕೋರಿಕೆ ಸಹ ಈ ಅರ್ಜಿಯಲ್ಲಿ ಇತ್ತು. ಎಸ್.ಟಿ. ಶಿವಜ್ಞಾನಮ್ ಎನ್ನುವವರು ಈ ಅರ್ಜಿ ಸಲ್ಲಿಸಿದ್ದರು.
ಪ್ರತಿಷ್ಠಾನವು ಕಳೆದ ವರ್ಷ ಅಕ್ರಮಗಳನ್ನು ಎಸಗಿತ್ತು ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಈ ವರ್ಷ ಅದಕ್ಕೆ ಮಹಾಶಿವರಾತ್ರಿ ಕಾರ್ಯಕ್ರಮ ಆಯೋಜಿಸಲು ಅವಕಾಶ ಕಲ್ಪಿಸಬಾರದು ಎಂದು ಅವರು ಕೋರಿದ್ದರು.
ಪ್ರತಿಷ್ಠಾನವು ಮಹಾಶಿವರಾತ್ರಿ ಆಚರಣೆ ಸಂದರ್ಭದಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸುತ್ತದೆಯೇ ಎಂಬುದನ್ನು ಪರಿಶೀಲಿಸುವಂತೆ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಗೆ (ಟಿಎನ್ಪಿಸಿಬಿ) ಹೈಕೋರ್ಟ್ ಕಳೆದ ವಾರ ಸೂಚಿಸಿತ್ತು. ಕೊಳಚೆ ನೀರನ್ನು ಸಂಸ್ಕರಿಸಲು ಅಗತ್ಯವಿರುವ ಸೌಲಭ್ಯವು ಈಶಾ ಪ್ರತಿಷ್ಠಾನದಲ್ಲಿ ಇದೆ ಎಂದು ಮಂಡಳಿಯು ಹೈಕೋರ್ಟ್ಗೆ ಸೋಮವಾರ ತಿಳಿಸಿತು.
ವಾಯು, ಜಲ ಮತ್ತು ಶಬ್ದ ಮಾಲಿನ್ಯದ ವಿಚಾರವಾಗಿ ಸಾರ್ವಜನಿಕರಿಂದ ಯಾವುದೇ ದೂರು ಬಂದಿಲ್ಲ ಎಂದು ಮಂಡಳಿ ಮಾಹಿತಿ ನೀಡಿತು. ಅಲ್ಲದೆ, ಶಬ್ದದ ಮಟ್ಟಕ್ಕೆ ಸಂಬಂಧಿಸಿದ ನಿಯಮಗಳನ್ನು ಪ್ರತಿಷ್ಠಾನವು ಪಾಲಿಸಿದೆ ಎಂದು ಹೇಳಿತು. ಇದನ್ನು ದಾಖಲಿಸಿಕೊಂಡ ನ್ಯಾಯಮೂರ್ತಿಗಳಾದ ಎಸ್.ಎಂ. ಸುಬ್ರಮಣಿಯಂ ಮತ್ತು ಕೆ. ರಾಜಶೇಖರ್ ಅವರು ಇರುವ ವಿಭಾಗೀಯ ಪೀಠವು ಅರ್ಜಿಯನ್ನು ವಜಾಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.