ADVERTISEMENT

ಡಿಎಚ್‌ಎಫ್‌ಎಲ್‌ ಪ್ರಕರಣ: ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್‌

ಪಿಟಿಐ
Published 28 ಸೆಪ್ಟೆಂಬರ್ 2021, 14:21 IST
Last Updated 28 ಸೆಪ್ಟೆಂಬರ್ 2021, 14:21 IST
ಕೋರ್ಟ್‌
ಕೋರ್ಟ್‌   

ಮುಂಬೈ (ಪಿಟಿಐ): ಗೃಹ ಸಾಲ ಸಂಸ್ಥೆ ಡಿಎಚ್‌ಎಫ್‌ಎಲ್‌ನಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿಗಳಾದ ಯೆಸ್‌ ಬ್ಯಾಂಕ್‌ನ ಸಂಸ್ಥಾಪಕ ರಾಣಾ ಕಪೂರ್‌ ಪತ್ನಿ ಬಿಂದು, ಪುತ್ರಿಯರಾದ ರೋಶಿನಿ ಕಪೂರ್‌ ಹಾಗೂ ರಾಧಾ ಕಪೂರ್‌ ಅವರಿಗೆ ಬಾಂಬೆ ಹೈಕೋರ್ಟ್‌ ಮಂಗಳವಾರ ಜಾಮೀನು ನಿರಾಕರಿಸಿತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರು,ಮತ್ತೊಬ್ಬ ಆರೋಪಿ ರಾಜೀವ್‌ ಆನಂದ್‌ ಅವರಿಗೂ ಜಾಮೀನು ನಿರಾಕರಿಸಿದರು.

ರಾಜೀವ್‌ ಆನಂದ್ ಅವರು ಯೆಸ್‌ ಬ್ಯಾಂಕ್‌ನ ಬಿಸಿನೆಸ್‌ ಹೆಡ್‌ ಹಾಗೂ ಡಿಎಚ್‌ಎಫ್‌ಎಲ್‌ ಸಮೂಹದ ಅಧ್ಯಕ್ಷ.

ADVERTISEMENT

‘ಈ ಪ್ರಕರಣದಲ್ಲಿ ಆರೋಪಿಗಳು ಮಾಡಿದ್ದಾರೆ ಎನ್ನಲಾದ ಅವ್ಯವಹಾರಗಳಿಂದ ದೇಶದ ಆರ್ಥಿಕ ಸ್ವಾಸ್ಥ್ಯಕ್ಕೆ ಭಾರಿ ಪೆಟ್ಟು ಬಿದ್ದಿದೆ’ ಎಂದು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅಭಿಪ್ರಾಯಪಟ್ಟರು.

‘ಆರ್ಥಿಕ ಅಪರಾಧಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ನಡೆಯುತ್ತಿವೆ. ಇಂಥ ಕೃತ್ಯಗಳಿಂದ ದೇಶದ ಪ್ರಗತಿ ಕುಂಠಿತಗೊಳ್ಳುತ್ತಿದೆ. ದೇಶದ ಆರ್ಥಿಕತೆಯೇ ಹಾಳಾಗುತ್ತಿದೆ’ ಎಂದು ಹೇಳಿದರು.

ಬಿಂದು ಕಪೂರ್‌, ಅವರ ಪುತ್ರಿಯರು ಹಾಗೂ ರಾಜೀವ್‌ ಆನಂದ್‌ ಅವರ ಜಾಮೀನು ಅರ್ಜಿಯನ್ನು ಸಿಬಿಐ ಕೋರ್ಟ್‌ ಸೆ. 18ರಂದು ತಿರಸ್ಕರಿಸಿತ್ತು. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು.

ಸಿಬಿಐ ಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು.

ಡಿಎಚ್ಎಫ್‌ಎಲ್‌ನಲ್ಲಿ ನಡೆದಿದೆ ಎನ್ನಲಾದ ₹4,000 ಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.