ಮುಂಬೈ: ಎರಡು ವರ್ಷಗಳ ಹಿಂದೆ ನಡೆದ ಆತ್ಮಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ.4ರಂದು ಬಂಧನಕ್ಕೆ ಒಳಗಾಗಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಶನಿವಾರ ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.
ಹೀಗಾಗಿ ಅರ್ನಬ್ ಪೊಲೀಸ್ ಕಸ್ಟಡಿಯಲ್ಲೇ ಇರಲಿದ್ದಾರೆ. ‘ಇದೇ ವೇಳೆ ಸಾಮಾನ್ಯ ಜಾಮೀನಿಗಾಗಿ ನೀವು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು’ ಎಂದು ಹೈಕೋರ್ಟ್ ಅರ್ನಬ್ ಅವರಿಗೆ ತಿಳಿಸಿದೆ.
‘ಶೀಘ್ರದಲ್ಲೇ ನಾವು ಆದೇಶವನ್ನು ಹೊರಡಿಸುತ್ತೇವೆ. ಆದರೆ, ಇಂದೇ(ಶನಿವಾರ) ಆದೇಶ ಹೊರಡಿಸುವುದು ಸಾಧ್ಯವಿಲ್ಲ. ತೀರ್ಪು ಕಾಯ್ದಿರಿಸಿರುವುದು ಕೆಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸುವುದಕ್ಕೆ ಅಡ್ಡಿಯಾಗುವುದಿಲ್ಲ’ ಎಂದು ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂಧೆ ಹಾಗೂ ಎಂ.ಎಸ್.ಕಾರ್ಣಿಕ್ ಅವರಿದ್ದ ಪೀಠವು ಹೇಳಿತು. ಅರ್ನಬ್ ಅವರ ಜೊತೆಗೆ ಇತರೆ ಇಬ್ಬರು ಆರೋಪಿಗಳ ಜಾಮೀನು ಅರ್ಜಿಯ ತೀರ್ಪನ್ನೂ ಪೀಠ ಕಾಯ್ದಿರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.