ನವದೆಹಲಿ: 1984ರ ಸಿಖ್ ವಿರೋಧಿ ಗಲಭೆಯ ಅಪರಾಧಿಯೊಬ್ಬರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು 12 ವಾರಗಳ ಕಾಲ ಅಮಾನತಿನಲ್ಲಿಡಲುದೆಹಲಿ ಹೈಕೋರ್ಟ್ ಸೋಮವಾರ ಆದೇಶಿಸಿದೆ.
‘ಅಪರಾಧಿ ನರೇಶ್ ಶೇರಾವತ್, ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜತೆಗೆ, ಕೊರೊನಾ ಸೋಂಕು ಸಹ ಬಹುಬೇಗ ತಗುಲಬಹುದು ಎನ್ನುವ ದೃಷ್ಟಿಯಿಂದ 12 ವಾರಗಳ ಕಾಲ ಶಿಕ್ಷೆಯನ್ನು ಅಮಾನತು ಮಾಡಲಾಗಿದೆ. ವೈಯಕ್ತಿಕ ಬಾಂಡ್ ಹಾಗೂ ₹20,000 ಶ್ಯೂರಿಟಿ ಬಾಂಡ್ ಅನ್ನು ನ್ಯಾಯಾಲಕ್ಕೆ ಸಲ್ಲಿಸಬೇಕು’ ಎಂದು ನ್ಯಾಯಮೂರ್ತಿ ಮನಮೋಹನ್ ಮತ್ತು ಸಂಜೀವ್ ನರುಲಾ ಅವರನ್ನು ಒಳಗೊಂಡ ಪೀಠ ಆದೇಶಿಸಿದೆ. ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯಿತು.
ಶೇರಾವತ್ ಅವರ ಆರೋಗ್ಯ ತೀವ್ರ ಹದಗೆಟ್ಟ ಕಾರಣ, ಅವರನ್ನು ತಿಹಾರ್ನ ಕೇಂದ್ರ ಕಾರಾಗೃಹ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ತಿಂಗಳ ಕಾಲ ಶಿಕ್ಷೆಯನ್ನು ಅಮಾನತು ಮಾಡುವಂತೆ ಕೋರಿ ಶೇರಾವತ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.