ತಿರುವನಂತಪುರಂ: ಕೇರಳದಲ್ಲಿ ಭಾರೀ ಮಳೆ ಮುಂದುವರಿದಿದ್ದು ಆಲಪ್ಪುಳ, ಇಡುಕ್ಕಿ, ಮಲಪ್ಪುರಂ, ವಯನಾಡ್, ಕೋಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೊಲ್ಲಂ, ಪತ್ತನಂತಿಟ್ಟ, ಕೋಟ್ಟಯಂ, ಎರ್ನಾಕುಳಂ, ತ್ರಿಶ್ಶೂರ್ ಮತ್ತು ಪಾಲಕ್ಕಾಡ್ನಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಅದೇ ವೇಳೆ ನೆಯ್ಯಾರ್, ಮಣಿಯಾರ್, ಭೂದತ್ತಾನ್ಕೆಟ್ಟ್, ಮಲಂಕರ, ಮಂಗಳಂ, ಕಾಂಞಿರಪ್ಪುಳ, ಸಿರುವಾಣಿ, ಮೂಲತ್ತರ, ಕರಂಬುಳ, ಕುಟ್ಯಾಡಿ ಮತ್ತು ಪಳಶಿ ಜಲಾಶಯ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಇದೆ.
ಕೆಎಸ್ಇಬಿಯ 8 ಪ್ರಮುಖ ಜಲಾಶಯಗಳಲ್ಲಿ ರೆಡ್ ಅಲರ್ಟ್ ಇದೆ. ಕಲ್ಲರಕುಟ್ಟಿ, ಲೋವರ್ ಪೆರಿಯಾರ್, ಪೊನ್ಮುಡಿ, ಇರಟ್ಟಯಾರ್, ಮುಳಿಯಾರ್, ಪೊರಿಂಗಲ್ಕೂತ್ತು, ಕಲ್ಲಾರ್ ಮತ್ತು ಕುಟ್ಯಾಡಿಯಲ್ಲಿ ನೀರು ಹೊರ ಹರಿಯಲು ಬಿಡಲಾಗಿದೆ, ಪತ್ತನಂತಿಟ್ಟ ಜಿಲ್ಲೆಯ ಪಂಪಾದಲ್ಲಿ ಬ್ಲೂ ಅಲರ್ಟ್ ಇದೆ.
ತಿರುವನಂತಪುರಂ, ಕೊಲ್ಲಂ, ಆಲಪ್ಪುಳಂ, ಎರ್ನಾಕುಳಂ, ಇಡುಕ್ಕಿ, ಕೋಟ್ಟಯಂ, ಪತ್ತನಂತಿಟ್ಟ, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಭಾನುವಾರ ಬೆಳಗ್ಗೆ 8 ಗಂಟೆಗೆ ಮುಲ್ಲಪ್ಪೆರಿಯಾರ್ ಅಣೆಕಟ್ಟಿನಲ್ಲಿ ನೀರಿನಮಟ್ಟ 135. 35 ಅಡಿವರೆಗೆ ಏರಿತ್ತು.
ವಯನಾಡಿನ ಸುಗಂಧರಿಯಲ್ಲಿ ಶನಿವಾರ ರಾತ್ರಿ ಮಣ್ಣು ಕುಸಿದು ಎರಡು ಮನೆಗಳಿಗೆ ಹಾನಿಯಾಗಿದೆ.
ರಾಜಮಲೆ ಭೂಕುಸಿತ: 28ಕ್ಕೇರಿದ ಸಾವಿನ ಸಂಖ್ಯೆ
ಇಡುಕ್ಕಿ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿ ಚಹಾ ಎಸ್ಟೇಟ್ ಕಾರ್ಮಿಕರ 20 ಮನೆಗಳು ನಾಶವಾಗಿದ್ದವು. ಈ ದುರಂತದಲ್ಲಿ ಮಣ್ಣಿನಡಿ ಸಿಲುಕಿದ್ದ 2 ಮೃತದೇಹಗಳನ್ನು ಭಾನುವಾರ ಹೊರ ತೆಗೆದಿದ್ದು ಸಾವಿನ ಸಂಖ್ಯೆ 28ಕ್ಕೇರಿದೆ.
ಸರ್ಕಾರದ ಮಾಹಿತಿ ಪ್ರಕಾರ ಭೂಕುಸಿತ ಸಂಭವಿಸಿದ ಹೊತ್ತಲ್ಲಿ 78 ಮಂದಿ ಅಲ್ಲಿದ್ದರು. 12 ಮಂದಿಯನ್ನು ರಕ್ಷಿಸಲಾಗಿದ್ದು 28 ಮೃತದೇಹ ಪತ್ತೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.