ತಿರುವನಂತಪುರ: ಕೇರಳ ದಲ್ಲಿ ಸೋಮವಾರವೂಭಾರಿ ಮಳೆ ಯಾಗಿದ್ದು, ರಾಜ್ಯದ 10 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.ಹೆಚ್ಚು ಮಳೆಯಾಗುತ್ತಿರುವ ವಯನಾಡು, ಮಲಪ್ಪುರಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಮಳೆ ಸಂಬಂಧಿ ಅವಘಡಗಳ ನಿರ್ವಹಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) ತಲಾ ಒಂದೊಂದು ತಂಡಗಳನ್ನು ನಿಯೋಜನೆ ಮಾಡಲಾಗಿದೆ.
ದಿನವೊಂದರಲ್ಲಿ 6ರಿಂದ 20 ಸೆಂ.ಮೀ.ನಷ್ಟು ಮಳೆಯಾಗುವ ಸಾಧ್ಯತೆ ಇದ್ದರೆ ‘ಆರೆಂಜ್ ಅಲರ್ಟ್’ ಘೋಷಿಸ ಲಾಗುತ್ತದೆ. ರಾಜ್ಯದಲ್ಲಿ ಹಿಂದಿನ 24 ಗಂಟೆಗಲ್ಲಿ ಸರಾಸರಿ 7 ಸೆಂ.ಮೀ. ಮಳೆಯಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ 8 ಮನೆಗಳು ನೆಲಕಚ್ಚಿವೆ. ತಿರುವನಂತಪುರದಲ್ಲಿ ಮಳೆ ಸಂಬಂಧಿ ಘಟನೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮಳೆಯಿಂದ ಉರುಳಿಬಿದ್ದಿದ್ದ ವಿದ್ಯುತ್ ಕಂಬದಲ್ಲಿನ ತಂತಿಯನ್ನು ಮುಟ್ಟಿ, ವಿದ್ಯುದಾಘಾತದಿಂದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ ಮಾಹಿತಿ ನೀಡಿದೆ.
ರಾಜ್ಯದ ಕುಂಡಳ, ಕಲ್ಲಾರ್ಕುಟ್ಟಿ, ಮಲಂಗರ ಮತ್ತು ಪೊನ್ಮುಡಿ ಜಲಾಶಯ ಗಳಿಗೆ ಒಳಹರಿವು ಹೆಚ್ಚಾಗಿದ್ದು, ಜಲಾಶಯಗಳು ಭರ್ತಿಯಾಗುತ್ತಿವೆ. ಹೀಗಾಗಿ ಈ ಜಲಾಶಯಗಳಿಂದ ನೀರನ್ನು ಹೊರಗೆ ಬಿಡಲಾಗತ್ತಿದೆ. ಇದರಿಂದಾಗಿ ಪೆರಿಯಾರ್, ಮುತಿರಪುಳ ಮತ್ತು ಮೂವಟ್ಟುಪುಳ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.