ADVERTISEMENT

ಹೇಮಾ ನೆರವಿಗೆ ಧರ್ಮೇಂದ್ರ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 20:16 IST
Last Updated 14 ಏಪ್ರಿಲ್ 2019, 20:16 IST
ಧರ್ಮೇಂದ್ರ, ಹೇಮಾಮಾಲಿನಿ
ಧರ್ಮೇಂದ್ರ, ಹೇಮಾಮಾಲಿನಿ   

ಲಖನೌ: ಸಿನಿಮಾಗಳಲ್ಲಿ ಖಳನಾಯಕರ ಕೈಯಿಂದ ಹೇಮಾಮಾಲಿನಿಯನ್ನು ರಕ್ಷಿಸಿದ್ದ ನಟ ಧರ್ಮೇಂದ್ರ, ಈಗ ಚುನಾವಣಾ ಕಣದಲ್ಲೂ ಹೇಮಾ ಅವರ ನೆರವಿಗೆ ಬಂದಿದ್ದಾರೆ. ಮಥುರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಹೇಮಾಮಾಲಿನಿ ಅವರು ಜಾಟ್‌ ಸಮುದಾಯದ ಜನರು ಹೆಚ್ಚಾಗಿರುವ ಭಾಗಗಳಲ್ಲಿ ಪ್ರಚಾರಕ್ಕಾಗಿ ಪತಿ ಧರ್ಮೇಂದ್ರ ನೆರವು ಪಡೆದಿದ್ದಾರೆ.

ಜಾಟ್‌ ಸಮುದಾಯದವರಾದ ಧರ್ಮೇಂದ್ರ, ತಮ್ಮ ಸಮುದಾಯದ ಜನರು ಹೆಚ್ಚಾಗಿರುವ ಪ್ರದೇಶಗಳಲ್ಲಿ ರೋಡ್‌ ಶೋಗಳನ್ನು ನಡೆಸಲಿದ್ದಾರೆ. ಸೋನಕ್‌ ಗ್ರಾಮದಲ್ಲಿ ಈಚೆಗೆ ಆಯೋಜಿಸಿದ್ದ ಚುನಾವಣಾ ಸಭೆಯೊಂದರಲ್ಲಿ ಮಾತನಾಡಿದ ಅವರು, ‘ಜಾಟರು ಹೊಲಗಳಲ್ಲಿ ಕೆಲಸ ಮಾಡುವವರಷ್ಟೇ ಅಲ್ಲ, ರಾಷ್ಟ್ರದ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಹೋರಾಡಲೂ ಸಿದ್ಧರಿರುತ್ತಾರೆ’ ಎಂದರು.

ಶೋಲೆ ಸಿನಿಮಾದಲ್ಲಿ ಹೇಮಾಮಾಲಿನಿಯ ಪ್ರೀತಿಯನ್ನು ಪಡೆಯಲು ನೀರಿನ ಟ್ಯಾಂಕ್‌ ಮೇಲೇರಿ, ‘ಜಿಗಿದು ಸಾಯುತ್ತೇನೆ’ ಎಂದು ನಾಟಕವಾಡಿದ ದೃಶ್ಯವನ್ನು ಪ್ರಚಾರ ಸಭೆಯಲ್ಲಿ ಉಲ್ಲೇಖಿಸಿದ ಧರ್ಮೇಂದ್ರ, ‘ಹೇಮಾಮಾಲಿನಿಯನ್ನು ಚುನಾವಣೆಯಲ್ಲಿ ಗೆಲ್ಲಿಸದಿದ್ದರೆ ನಾನು ನಿಮ್ಮ ಊರಿನ ಟ್ಯಾಂಕ್‌ ಮೇಲೆ ಏರಿ ಜಿಗಿದು ಸಾಯುತ್ತೇನೆ’ ಎಂದು ಪ್ರೇಕ್ಷಕರಲ್ಲಿ ನಗೆ ಉಕ್ಕಿಸಿದರು.

ADVERTISEMENT

ಧರ್ಮೇಂದ್ರ ಅವರು ಪ್ರಚಾರಕ್ಕೆ ಬಂದಿದ್ದರಿಂದ ಜಾಟ್‌ ಮತಗಳು ಒಡೆಯುವುದನ್ನು ತಡೆದಂತಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.