ಅಮಿತ್ ಶಾ
– ಪಿಟಿಐ ಚಿತ್ರ
ಗಾಂಧಿನಗರ (ಪಿಟಿಐ): ‘ಹಿಂದಿ ಹಾಗೂ ಇತರೆ ಭಾರತೀಯ ಭಾಷೆಗಳ ನಡುವೆ ಯಾವುದೇ ಸಂಘರ್ಷವಿಲ್ಲ. ಹಿಂದಿಯು ಬಳಕೆಯ ಭಾಷೆಯಾಗಿ ಸೀಮಿತವಾಗದೆ ವಿಜ್ಞಾನ, ತಂತ್ರಜ್ಞಾನ, ನ್ಯಾಯಾಂಗ ಹಾಗೂ ಪೊಲೀಸ್ ಭಾಷೆಯಾಗಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಇಲ್ಲಿ ಭಾನುವಾರ ಆಯೋಜಿಸಿದ್ದ 5ನೇ ಅಖಿಲ ಭಾರತ ರಾಜಭಾಷಾ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಭಾರತೀಯರು ತಮ್ಮ ಭಾಷೆಗಳನ್ನು ಸಂರಕ್ಷಿಸಬೇಕು. ಪೋಷಕರು ತಮ್ಮ ಮಕ್ಕಳೊಂದಿಗೆ ಮಾತೃಭಾಷೆಯಲ್ಲೇ ಮಾತನಾಡಬೇಕು. ಇದು ಭಾಷಾ ಬೆಳವಣಿಗೆಗೆ ಸಹಕಾರಿ ಯಾಗುತ್ತದೆ’ ಎಂದು ಅವರು ಪ್ರತಿಪಾದಿಸಿದರು.
‘ಸಮಾಜ ಸುಧಾರಕರಾದ ದಯಾನಂದ ಸರಸ್ವತಿ, ಮಹಾತ್ಮ ಗಾಂಧಿ, ಕೆ.ಎಂ.ಮುನ್ಶಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಸೇರಿದಂತೆ ಅನೇಕರು ಹಿಂದಿ ಭಾಷೆಯನ್ನು ಒಪ್ಪಿಕೊಂಡಿದ್ದರು ಹಾಗೂ ಪ್ರಚಾರ ಮಾಡಿದ್ದರು. ಗುಜರಾತಿ ಹಾಗೂ ಹಿಂದಿ ಭಾಷೆಗಳು ಸಹಬಾಳ್ವೆ ಸಾಧಿಸಿದ್ದು, ಎರಡೂ ಭಾಷೆಗಳು ಬೆಳವಣಿಗೆ ಹೊಂದಿವೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಎಲ್ಲ ಭಾಷೆಗಳನ್ನೂ ಗೌರವಿಸಬೇಕು’
ನವದೆಹಲಿ: ‘ಭಾರತೀಯ ಭಾಷೆಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಲಹೆ ನೀಡಿದರು.
ಹಿಂದಿ ದಿವಸ ಅಂಗವಾಗಿ ಸಂದೇಶ ನೀಡಿದ ಅವರು, ‘ಸ್ವಾವಲಂಬಿಯಾದ, ಆತ್ಮಗೌರವದಿಂದ ಕೂಡಿದ ದೇಶವು ಅಭಿವೃದ್ಧಿ ಕಡೆಗೆ ಮುನ್ನಡೆಯಬೇಕು’ ಎಂದರು.
‘ಹಿಮಾಲಯದಿಂದ ದಕ್ಷಿಣದ ಕಡಲತೀರದವರೆಗೆ, ಮರುಭೂಮಿಯಿಂದ ದಟ್ಟಾರಣ್ಯ ಹಾಗೂ ಹಳ್ಳಿಗಳವರೆಗೆ ಮನುಷ್ಯರಿಗೆ ಪ್ರತಿಯೊಂದು ಸನ್ನಿವೇಶದಲ್ಲೂ ಸಂಘಟಿತಗೊಳ್ಳಲು, ಸಂವಹನ ಹಾಗೂ ಅಭಿವ್ಯಕ್ತಿ ಮೂಲಕ ಒಗ್ಗೂಡಲು ಭಾಷೆಗಳು ದಾರಿ ತೋರಿಸಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.