ADVERTISEMENT

‘ಹಿಂದೂಗಳಿಗೆ ಮಾತ್ರ’: ತಮಿಳುನಾಡಿನಲ್ಲಿ ಆಕ್ಷೇಪಕ್ಕೆ ಗುರಿಯಾದ ಉದ್ಯೋಗ ಜಾಹೀರಾತು

ಐಎಎನ್ಎಸ್
Published 17 ಅಕ್ಟೋಬರ್ 2021, 9:40 IST
Last Updated 17 ಅಕ್ಟೋಬರ್ 2021, 9:40 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ಚೆನ್ನೈ: ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ನೀಡಿರುವ ಉದ್ಯೋಗ ಜಾಹೀರಾತಿನಲ್ಲಿ ‘ಹಿಂದೂಗಳಿಗೆ ಮಾತ್ರ’ ಎಂದು ಉಲ್ಲೇಖಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಇಲಾಖೆಯು ಕೊಳತ್ತೂರಿನಲ್ಲಿ ‘ಕಪಾಲೀಶ್ವರ್ ಆರ್ಟ್‌ ಆ್ಯಂಡ್ ಸೈನ್ಸ್’ ಕಾಲೇಜು ಆರಂಭಿಸುತ್ತಿದ್ದು, ಅದರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಗೆ ವಿವಿಧ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿತ್ತು. ಅಕ್ಟೋಬರ್ 13ರಂದು ಜಾಹೀರಾತು ಪ್ರಕಟವಾಗಿದ್ದು, ಅದರಲ್ಲಿ ‘ಹಿಂದೂಗಳಿಗೆ ಮಾತ್ರ’ ಎಂಬ ಒಕ್ಕಣೆಯೂ ಇತ್ತು.

ಬಿ.ಕಾಂ, ಬಿಬಿಎ, ಬಿಎಸ್‌ಸಿ ಕಂಪ್ಯೂಟರ್ ಸೈನ್ಸ್, ಬಿಸಿಎ, ತಮಿಳು, ಇಂಗ್ಲಿಷ್ ಹಾಗೂ ಗಣಿತಶಾಸ್ತ್ರ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರ ನೇರ ನೇಮಕಾತಿಗೆ ಅರ್ಜಿ ಸಲ್ಲಿಸುವಂತೆ ಜಾಹೀರಾತು ನೀಡಲಾಗಿತ್ತು. ಬೋಧಕೇತರ ಸಿಬ್ಬಂದಿಯ ನೇರ ನೇಮಕಾತಿಗೂ ಅರ್ಜಿ ಆಹ್ವಾನಿಸಲಾಗಿತ್ತು.

ADVERTISEMENT

‘ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿ 36 ಶಾಲೆಗಳು, 5 ವಿಜ್ಞಾನ ಮತ್ತು ಕಲಾ ಕಾಲೇಜುಗಳು, ಒಂದು ಪಾಲಿಟೆಕ್ನಿಕ್ ಕಾಲೇಜು ಇವೆ. ಇದೇ ಮೊದಲ ಬಾರಿಗೆ ಇಂಥ ಜಾಹೀರಾತು ನೀಡಲಾಗಿದೆ’ ಎಂದು ವಿಶ್ವವಿದ್ಯಾಲಯ ಬೋಧಕರ ಸಂಘದದ ಮಾಜಿ ಅಧ್ಯಕ್ಷ ಕೆ.ಪಾಂಡ್ಯನ್ ಹೇಳಿದ್ದಾರೆ.

ಸರ್ಕಾರದ ಇಲಾಖೆಯೊಂದು ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಬಾರದು. ಇತರ ಧರ್ಮದವರು ಅನರ್ಹರೆಂದು ಹೇಳಬಾರದು ಎಂದೂ ಅವರು ಹೇಳಿದ್ದಾರೆ. ಸರ್ಕಾರವು ನಡೆಸುವ ಸಂಸ್ಥೆಗಳು ಸಂವಿಧಾನದ ಪ್ರಕಾರವೇ ಕಾರ್ಯನಿರ್ವಹಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಈ ವಿಚಾರವಾಗಿ ಧಾರ್ಮಿಕ ದತ್ತಿ ಸಚಿವ ಆರ್‌.ಕೆ.ಶೇಖರ್ ಬಾಬು ಅವರು ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.