ರಿತುರಾಜ್ ಹೋಟೆಲ್ನ ಹೊರಗೆ ಸಿಬ್ಬಂದಿ ಇರುವ ದೃಶ್ಯ
ಪಿಟಿಐ ಚಿತ್ರ
ಕೋಲ್ಕತ್ತ: ಇಲ್ಲಿನ ಹೋಟೆಲ್ವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ಖುರ್ಷಿದ್ ಆಲಂ ಎಂದು ಗುರುತಿಸಲಾಗಿದೆ. ಈತನ್ನು ಹೋಟೆಲ್ನ ಒಳಾಂಗಣ ವಿನ್ಯಾಸ ಮಾಡುವಾಗ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಹೆಚ್ಚಿನದಾಗಿ ಬೆಂಕಿ ಹೊತ್ತಿಕೊಳ್ಳುವಂತಹ ವಸ್ತುಗಳಿಂದ ವಿನ್ಯಾಸ ಮಾಡಿದ್ದೆ ಅನಾಹುತಕ್ಕೆ ಮತ್ತೊಂದು ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಲ್ಲಿನ ಹೋಟೆಲ್ವೊಂದರಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ 14 ಮಂದಿ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದರು. ಪ್ರಕರಣ ಸಂಬಂಧ ಹೋಟೆಲ್ನ ಮಾಲೀಕ ಮತ್ತು ವ್ಯವಸ್ಥಾಪಕನನ್ನು ಗುರುವಾರ ಬಂಧಿಸಲಾಗಿತ್ತು. ರಿತುರಾಜ್ ಹೋಟೆಲ್ ಮಾಲೀಕ ಆಕಾಶ್ ಚಾವ್ಲಾ ಮತ್ತು ವ್ಯವಸ್ಥಾಪಕ ಗೌರವ್ ಕಪೂರ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದರು.
42 ಕೊಠಡಿಗಳಿದ್ದ 6 ಅಂತಸ್ತಿನ ರಿತುರಾಜ್ ಹೋಟೆಲ್ನಲ್ಲಿ ಮಂಗಳವಾರ ರಾತ್ರಿ 7.30 ಸುಮಾರಿಗೆ ದುರ್ಘಟನೆ ಸಂಭವಿಸಿತ್ತು. ಮೃತರಲ್ಲಿ 11 ಪುರುಷರು, ಒಬ್ಬ ಮಹಿಳೆ ಹಾಗೂ ಇಬ್ಬರು ಮಕ್ಕಳು ಸೇರಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ, ಗಾಯಗೊಂಡವರಿಗೆ ₹50000 ಪರಿಹಾರ ಘೋಷಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಇದೇ ಪ್ರಮಾಣದಲ್ಲಿ ಪರಿಹಾರ ಘೋಷಿಸಿದ್ದರು.
ಈ ಅವಘಡದ ವೇಳೆ 88 ಮಂದಿ ಅತಿಥಿಗಳು ಮತ್ತು ಸಿಬ್ಟಂದಿ ಇದ್ದರು. ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಹಲವರು ಗಾಬರಿಯಲ್ಲಿ ಕಿಟಕಿಗಳ ಮೂಲಕ ಹೋಟೆಲ್ನಿಂದ ಹೊರಕ್ಕೆ ಹಾರಿ ಮೃತಪಟ್ಟಿದ್ದರು. ಇನ್ನೂ ಕೆಲವರು ಬೆಂಕಿಯ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.