ಹೈದರಾಬಾದ್: ಜಮ್ಮು ಮತ್ತು ಕಾಶ್ಮೀರದ ಯುವಕರು ಭಯೋತ್ಪಾದನೆಯತ್ತ ಹೊರಳದಂತೆ ಆರಂಭಿಕ ಹಂತದಲ್ಲೇ ಅಲ್ಲಿನ ತಾಯಂದಿರನ್ನು, ಮಹಿಳೆಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿ ಎಂದು ಮಹಿಳಾ ಪೊಲೀಸ್ ಸಿಬ್ಬಂದಿಯನ್ನುಪ್ರಧಾನಿ ನರೇಂದ್ರ ಮೋದಿ ಅವರು ಪ್ರೇರೇಪಿಸಿದರು.
ಆನ್ಲೈನ್ ಮುಖಾಂತರಸರ್ದಾರ್ ವಲ್ಲಭಬಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಐಪಿಎಸ್ ಪರೀಕ್ಷಣಾವಧಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೋವಿಡ್–19 ಪಿಡುಗಿನ ಸಂದರ್ಭದಲ್ಲಿ ಪೊಲೀಸರ ಮಾನವೀಯತೆಯನ್ನು ದೇಶದ ಜನರು ಗಮನಿಸಿದ್ದಾರೆ’ ಎಂದರು.
ಪರೀಕ್ಷಣಾವಧಿ ಮಹಿಳಾ ಅಧಿಕಾರಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಮೋದಿ, ‘ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಜನರು ನನಗೆ ಅಚ್ಚುಮೆಚ್ಚು. ಇವರೊಂದಿಗೆ ನಾನು ನಿಕಟ ಸಂಪರ್ಕ ಹೊಂದಿದ್ದೇನೆ. ಅವರು ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಾರೆ. ಹೀಗಾಗಿ, ಅಲ್ಲಿ ತಪ್ಪು ದಾರಿ ಹಿಡುಯುತ್ತಿರುವವರನ್ನು ನಾವು ತಡೆಯಬೇಕು. ಈ ಕೆಲಸ ಮಹಿಳೆಯರಿಂದಷ್ಟೇ ಸಾಧ್ಯ. ಮಹಿಳಾ ಸಿಬ್ಬಂದಿ ಅಲ್ಲಿನ ತಾಯಂದಿರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಯುವಕರು ಭಯೋತ್ಪಾದನೆಯತ್ತ ಸಾಗುವುದನ್ನು ತಪ್ಪಿಸಬಹುದು, ಆರಂಭಿಕ ಹಂತದಲ್ಲೇ ಇದನ್ನು ಮಾಡುವುದರಿಂದ ಬಹಳಷ್ಟು ಸಹಕಾರಿಯಾಗಲಿದೆ’ ಎಂದರು.
ಸೇವೆಯ ಮೇಲಿನ ಬದ್ಧತೆ ಸ್ಫೂರ್ತಿ: ಅಧಿಕಾರಿಗಳನ್ನು ಅಭಿನಂದಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸೇವೆಯ ಮೇಲೆ ಇರುವ ಐಪಿಎಸ್ ಅಧಿಕಾರಿಗಳ ಬದ್ಧತೆಯು ಇತರೆ ಯುವಜನರು ಪೊಲೀಸ್ ಸೇವೆಗೆ ಸೇರಲು ಸ್ಫೂರ್ತಿಯಾಗಿದೆ ಎಂದು ಶ್ಲಾಘಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.