ADVERTISEMENT

ಹೈದರ್‌ಪೋರಾ ಎನ್‌ಕೌಂಟರ್‌ ಪಾರದರ್ಶಕವಾಗಿ ನಡೆದಿದೆ: ಡಿಜಿಪಿ ದಿಲ್ವಾಗ್‌ ಸಿಂಗ್‌

ರಾಜಕೀಯ ನಾಯಕರ ಬಳಿ ಸೂಕ್ತ ಸಾಕ್ಷ್ಯಗಳಿದ್ದರೆ ಒದಗಿಸಲಿ: ಸವಾಲು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 17:46 IST
Last Updated 31 ಡಿಸೆಂಬರ್ 2021, 17:46 IST
ದಿಲ್ಬಾಗ್‌ ಸಿಂಗ್‌
ದಿಲ್ಬಾಗ್‌ ಸಿಂಗ್‌   

ಜಮ್ಮು: ‘ಶ್ರೀನಗರದ ಹೈದರ್‌ಪೋರಾ ಎನ್‌ಕೌಂಟರ್‌ ಪ್ರಕರಣವು ಪಾರದರ್ಶಕವಾಗಿ ನಡೆದಿದೆ. ಆದರೆ ಈ ಕುರಿತು ತನಿಖೆ ನಡೆಸಿದ ಪೊಲೀಸ್‌ ವಿಶೇಷ ತನಿಖಾ ತಂಡ (ಎಸ್‌ಐಟಿ)ವು ಭದ್ರತಾ ಪಡೆಗಳಿಗೆ ಕ್ಲೀನ್‌ಚಿಟ್‌ ನೀಡಿರುವ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿರುವ ರಾಜಕೀಯ ನಾಯಕರ ಬಳಿ ಸೂಕ್ತ ಸಾಕ್ಷ್ಯಾಧಾರಗಳಿದ್ದರೆ ಒದಗಿಸಲಿ’ ಎಂದು ಡಿಜಿಪಿ ದಿಲ್ಬಾಗ್‌ ಸಿಂಗ್‌ ಸವಾಲು ಹಾಕಿದರು.

‘ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಪಡೆ ವೃತ್ತಿಪರವಾಗಿದ್ದು, ಎಲ್ಲ ಕಾರ್ಯಾಚರಣೆಗಳನ್ನು ವಿಶೇಷ ಪೊಲೀಸ್‌ ಅಧಿಕಾರಿಗಳ ತಂಡದಿಂದ ನಡೆಸಲಾಗುತ್ತಿದೆ. ಅದೇ ರೀತಿ ಹೈದರ್‌ಪೋರಾ ಎನ್‌ಕೌಂಟರ್‌ ಪ್ರಕರಣವನ್ನು ಪಾರದರ್ಶಕವಾಗಿಯೇ ನಡೆಸಲಾಗಿದೆ. ಆದರೆ ಈ ಎನ್‌ಕೌಂಟರ್‌ ಕುರಿತು ಕಾಶ್ಮೀರ ಮೂಲದ ರಾಜಕೀಯ ಪಕ್ಷಗಳ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅವರು ಸಾಕ್ಷ್ಯಾಧಾರಗಳಿದ್ದರೆ ಸಂಬಂಧಿಸಿದ ಮ್ಯಾಜಿಸ್ಟ್ರೇಟ್‌ ಹಾಗೂ ಎಸ್‌ಐಟಿ ತನಿಖಾಧಿಕಾರಿಗಳಿಗೆ ಸಲ್ಲಿಸಬಹುದು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಮಾಜಿ ಸಿಎಂಗಳಾದ ಫಾರೂಕ್‌ ಅಬ್ದುಲ್ಲಾ ಹಾಗೂ ಮೆಹಬೂಬ ಮುಫ್ತಿ ಅವರು ಭದ್ರತಾ ಪಡೆಗಳಿಗೆ ಕ್ಷೀನ್‌ಚಿಟ್‌ ನೀಡಲಾಗಿದೆ ಎಂಬ ಆರೋಪ ಕುರಿತು ಕೇಳಿದ ಪ್ರಶ್ನೆಗೆ ‘ರಾಜಕೀಯ ನಾಯಕರ ಇಂತಹ ಬೇಜವಾಬ್ದಾರಿ ಹೇಳಿಕೆಗಳಿಂದ ಕಾರ್ಯಾಚರಣೆಯಲ್ಲಿ ತೊಡಗಿದ ಪೊಲೀಸರ ಮನಸ್ಸಿಗೆ ನೋವಾಗುತ್ತದೆ. ತನಿಖೆಯ ಭಾಗವಾಗಿರದ ಹಾಗೂ ಕಾರ್ಯಾಚರಣೆಗೆ ಬಗ್ಗೆ ಅರಿವು ಇರದ ಜನರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಡಿಜಿಪಿ ಆರೋಪಿಸಿದರು.

ADVERTISEMENT

‘ರಾಜಕೀಯ ನಾಯಕರ ಈ ಆಕ್ಷೇಪ ಕಾನೂನು ಬಾಹಿರವಾಗಿದ್ದು, ಈ ಕುರಿತು ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.