ಭೋಪಾಲ (ಪಿಟಿಐ): ‘ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ, ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದೆ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ತಿಳಿಸಿದ್ದಾರೆ.
‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಹಿನ್ನೆಡೆ ಅನುಭವಿಸಿದ ನಂತರ, ಪ್ರಮುಖ ಸ್ಥಾನಗಳಲ್ಲಿರುವ ಪಕ್ಷದ ಯಾವುದೇ ನಾಯಕರು ಸಹ ಇದಕ್ಕೆ ಹೊಣೆ ಹೊರಲಿಲ್ಲ ಎಂದು ರಾಹುಲ್ ಗಾಂಧಿ ನಿರಾಶೆ ವ್ಯಕ್ತಪಡಿಸಿದ್ದರು. ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಅವರು ನಿರ್ಧರಿಸಿದರು’ ಎಂದು ವರದಿಯಾಗಿತ್ತು.
ಇದಾದ ಬೆನ್ನಲ್ಲೇ ಕಮಲನಾಥ್ ಈ ಹೇಳಿಕೆ ನೀಡಿದ್ದಾರೆ.
‘ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಕಳಪೆ ಸಾಧನೆ ಮಾಡಿದ್ದಕ್ಕೆ ಯಾರು ಹೊಣೆ ತಿಳಿದಿಲ್ಲ. ಆದರೆ ನೈತಿಕವಾಗಿ ನಾನೇ ಅದಕ್ಕೆ ಜವಾಬ್ದಾರಿ ಎಂದು ಭಾವಿಸುತ್ತೇನೆ. ಸ್ಥಾನ ತೊರೆಯುವುದಾಗಿ ನಾನು ಹೇಳಿದ್ದೆ’ ಎಂದು ನಾಯ್ಡು ತಿಳಿಸಿದ್ದಾರೆ.
ಮಧ್ಯಪ್ರದೇಶದ 29 ಲೋಕಸಭಾ ಕ್ಷೇತ್ರಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿತ್ತು.
‘ಶೇ 1ರಷ್ಟು ಸಾಧ್ಯತೆಯೂ ಇಲ್ಲ’ (ಹೈದರಾಬಾದ್): ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆ ಶೇ 1ರಷ್ಟು ಸಹ ಇಲ್ಲ ಎಂದು ಪಕ್ಷದ ಹಿರಿಯ ನಾಯಕ ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ.
‘ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಬೇರೆ ಹೆಸರು ಆಯ್ಕೆ ಮಾಡುವ ಮೊದಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಖಂಡಿತ ಸಭೆ ಸೇರುತ್ತದೆ. ರಾಹುಲ್ ರಾಜೀನಾಮೆಯನ್ನು ಸಿಡಬ್ಲ್ಯುಸಿ ಅಂಗೀಕರಿಸುವ ತನಕವೂ ಈ ಕುರಿತು ಊಹಾಪೋಹಗಳು ಹರಡುತ್ತಲೇ ಇರುತ್ತವೆ’ ಎಂದು ಮೊಯ್ಲಿ ತಿಳಿಸಿದ್ದಾರೆ.
ತಂಖಾ ರಾಜೀನಾಮೆ (ನವದೆಹಲಿ): ಕಾಂಗ್ರೆಸ್ ಮುಖಂಡ, ರಾಜ್ಯಸಭೆ ಸದಸ್ಯ ವಿವೇಕ್ ತಂಖಾ ಅವರು ಪಕ್ಷದ ಕಾನೂನು ಮತ್ತು ಮಾನವಹಕ್ಕುಗಳ ಘಟಕಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಕ್ಷದ ಪುನರ್ರಚನೆಗೆ ಅಧ್ಯಕ್ಷ ರಾಹುಲ್ಗಾಂಧಿ ಅವರಿಗೆ ಮುಕ್ತ ಅವಕಾಶ ಕಲ್ಪಿಸಲು ಇತರೆ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಅವರು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.