ಈರೋಡ್ (ತಮಿಳುನಾಡು): ಮೂರು ದಿನಗಳ ತಮಿಳುನಾಡು ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈರೋಡ್ ರೋಡ್ ಶೋ ವೇಳೆಯಲ್ಲಿ, ತಾನಿಲ್ಲಿ 'ಮನ್ ಕಿ ಬಾತ್' ಹೇಳಲು ಬಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ನಾನಿಲ್ಲಿಏನು ಮಾಡಬೇಕೆಂದು ಅಥವಾ ಮನ್ ಕಿ ಬಾತ್ ಹೇಳಲು ಬಂದಿಲ್ಲ. ಬದಲಾಗಿ ನಿಮ್ಮ ಮಾತುಗಳನ್ನು ಆಲಿಸಲು, ನಿಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳ ಪರಿಹಾರಕ್ಕಾಗಿ ಸಹಾಯ ಮಾಡಲು ಬಂದಿದ್ದೇನೆ' ಎಂದು ಹೇಳಿದರು.
ಬಿಜೆಪಿ ಸರ್ಕಾರ ಮತ್ತು ರಾಜ್ಯ ಸರ್ಕಾರದ ನೀತಿಗಳಿಂದಾಗಿ ತಮಿಳುನಾಡಿನ ಜನರು ಕಷ್ಟಪಡುತ್ತಿದ್ದಾರೆ. ನಾನು ಅವರಿಗೆ ಸಹಾಯ ಮಾಡಲು ಬಂದಿದ್ದೇನೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆಯೇ ರಾಜ್ಯದೊಂದಿಗೆ ನನ್ನ ಕುಟುಂಬ ಇಟ್ಟುಕೊಂಡಿರುವ ಸಂಬಂಧ. ಇಂದಿರಾ ಜೀ ಅವರ ಪ್ರೀತಿ, ನನ್ನ ಅಪ್ಪ (ರಾಜೀವ್ ಗಾಂಧಿ) ಈ ರಾಜ್ಯದಿಂದ ಪಡೆದ ಪ್ರೀತಿ. ಈ ಎಲ್ಲ ಪ್ರೀತಿ ಹಾಗೂ ವಾತ್ಸಲ್ಯಕ್ಕಾಗಿ ನಾನು ನಿಮಗೆ ಚಿರ ಋಣಿಯಾಗಿದ್ದೇನೆ ಎಂದರು.
ದೇಶದಲ್ಲಿ ಕೋವಿಡ್-19 ಬಿಕ್ಕಟ್ಟನ್ನು ಎದುರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಭೇಟಿಯು ಹೆಚ್ಚಿನ ಮಹತ್ವ ಗಿಟ್ಟಿಸಿಕೊಂಡಿದೆ.
ಈ ಮೊದಲು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಕುರಿತಂತೆ ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡರು. ತೈಲ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದರೆ, ಮೋದಿ ಸರ್ಕಾರ ತೆರಿಗೆ ಸಂಗ್ರಹದಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.