ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂದು ಹೇಳಿಕೊಂಡು ಮಧ್ಯಪ್ರದೇಶದ ರಾಜ್ಯಪಾಲ ಲಾಲ್ದಿ ಟಂಡನ್ ಅವರಿಗೆ ಕರೆ ಮಾಡಿದ್ದ ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಯನ್ನು ಮಧ್ಯಪ್ರದೇಶ ವಿಶೇಷ ಕಾರ್ಯಪಡೆ(STF)ಯು ಬಂಧಿಸಿದೆ. ಕರೆ ಮಾಡಿದ್ದ ಅಧಿಕಾರಿಯು ತನ್ನ ಸ್ನೇಹಿತನಿಗೆ ವೈದ್ಯಕೀಯ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಯನ್ನು ನೀಡುವಂತೆ ಹೇಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಎಎಫ್ನ ದೆಹಲಿ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಕುಲದೀಪ್ ಬಘೇಲಾ ಮತ್ತು ಭೋಪಾಲ್ ಮೂಲದ ದಂತ ವೈದ್ಯನಾಗಿದ್ದ ಸ್ನೇಹಿತ ಚಂದ್ರೇಶ್ ಕುಮಾರ್ ಶುಕ್ಲಾ ಎಂಬುವವರನ್ನು ಬಂಧಿಸಲಾಗಿದೆ. ಫೋನ್ ಕರೆಯಲ್ಲಿ ಈತನನ್ನು ಅಮಿತ್ ಶಾ ಅವರ ಪಿಎ ಎಂದು ಹೇಳಲಾಗಿತ್ತು.
ಎಸ್ಟಿಎಫ್ನ ಹೆಚ್ಚುವರಿ ಮಹಾನಿರ್ದೇಶಕ(ADG) ಅಶೋಕ್ ಅಶ್ವತಿ ಸುದ್ದಿಸಂಸ್ಥೆ ಪಿಟಿಐನೊಂದಿಗೆ ಮಾತನಾಡಿ, ಬಘೇಲಾ ಅವರು ರಾಜ್ಯಪಾಲರಿಗೆ ಕರೆ ಮಾಡಿ ತನ್ನ ಸ್ನೇಹಿತ ಶುಕ್ಲಾ ಎಂಬುವರಿಗೆ ಜಬ್ಲಾಪುರ ಮೂಲದ ಮಧ್ಯಪ್ರದೇಶ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಯನ್ನಾಗಿ ನೇಮಿಸುವಂತೆ ಶಿಫಾರಸು ಮಾಡಿದ್ದರು ಎಂದು ತಿಳಿಸಿದ್ದಾರೆ.
ಐಎಎಫ್ನ ಕಮಾಂಡರ್ ಕಲದೀಪ್ ಬಘೇಲಾ ಅವರನ್ನು ಅಮಿತ್ ಶಾ ಅವರ ಸೋಗಿನಲ್ಲಿ ಕರೆ ಮಾಡಿದ್ದಕ್ಕಾಗಿ ಬಂಧಿಸಿದ್ದೇವೆ. ಅಲ್ಲದೆ ಅವರ ಸ್ನೇಹಿತ ದಂತವೈದ್ಯ ಡಾ. ಚಂದ್ರೇಶ್ ಕುಮಾರ್ ಶುಕ್ಲಾ ರನ್ನು ಬಂಧಿಸಿದ್ದೇವೆ. ಇಬ್ಬರು ಸುಮಾರು 35 ರಿಂದ 40 ವರ್ಷ ವಯೋಮಾನದವರು ಎಂದಿದ್ದಾರೆ.
ಬಘೇಲಾ ಅವರು ಮೊದಲಿಗೆ ಮಾಜಿ ಸಂಸದ ರಾಮ್ನರೇಶ್ ಯಾದವ್ ಅವರಿಗೆ ಮೂರು ವರ್ಷಗಳ ಅವಧಿಗೆ ಆಪ್ತಸಹಾಯಕನನ್ನಾಗಿ ನೇಮಿಸಲಾಗಿತ್ತು. ಶುಕ್ಲಾಗೆ ಉಪಕುಲಪತಿಯಾಗಬೇಕೆಂಬ ಆಸೆಯಿತ್ತು. ಹೀಗಾಗಿ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಾಗ ಅರ್ಜಿ ಸಲ್ಲಿಸಿದ್ದರು. ಬಳಿಕ ಬಘೇಲಾ ಅವರನ್ನು ಸಂಪರ್ಕಿಸಿ ತಾನು ವಿಸಿ ಆಗಬೇಕು. ಮತ್ತು ಯಾರಾದರೂ ಹಿರಿಯ ನಾಯಕರು ಶಿಫಾರಸು ಮಾಡಿದರೆ ಅದು ಸಾಧ್ಯವೆಂದು ತಿಳಿಸಿದ್ದರು. ಬಳಿಕ ಇಬ್ಬರು ಸೇರಿ ರಾಜ್ಯಪಾಲರಿಗೆ ಕರೆ ಮಾಡಿ ಓರ್ವ ಗೃಹ ಸಚಿವ ಅಮಿತ್ ಶಾ ಮತ್ತು ಅವರ ಪಿಎ ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.