ಶ್ರೀನಗರ: ಭಾರತೀಯ ವಾಯುಪಡೆಯು (ಐಎಎಫ್) ಇದೇ 26ರಂದು ಇಲ್ಲಿನ ಪ್ರಸಿದ್ಧ ದಾಲ್ ಸರೋವರದ ಮೇಲೆ ‘ಏರ್ ಶೋ’ ನಡೆಸಲಿದೆ.
ಜಮ್ಮು ಮತ್ತು ಕಾಶ್ಮೀರದ ಯುವ ಸಮುದಾಯವನ್ನು ಐಎಎಫ್ ಸೇರುವಂತೆ ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಐಎಎಫ್ನ ಅಧಿಕಾರಿಗಳು ತಿಳಿಸಿದ್ದಾರೆ.
ವಿವಿಧ ಶಾಲಾ, ಕಾಲೇಜುಗಳ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ ಎಂದ ಅವರು ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಕಾಶ್ಮೀರದ ವಿಭಾಗೀಯ ಆಯುಕ್ತ ಪಾಂಡುರಂಗ ಕೆ. ಪೋಲ್ ಅವರು, ವಾಯು ಪ್ರದರ್ಶನದ ಮುಖ್ಯ ಉದ್ದೇಶವು ಕಣಿವೆಯ ಯುವ ಸಮುದಾಯವನ್ನು ಭಾರತೀಯ ವಾಯುಪಡೆಗೆ ಸೇರಲು ಪ್ರೇರೇಪಿಸುವುದು ಹಾಗೂ ಈ ಪ್ರದೇಶದಲ್ಲಿನ ಪ್ರವಾಸೋದ್ಯಮವನ್ನು ಉತ್ತೇಜಿಸುವುದಾಗಿದೆ ಎಂದರು.
‘ಆಜಾದಿ ಕಾ ಅಮೃತ್ ಮಹೋತ್ಸವ’ ಆಚರಣೆಯ ಭಾಗವಾಗಿ ಐಎಎಫ್ ಈ ಪ್ರದರ್ಶನ ಏರ್ಪಡಿಸಿದೆ. ‘ನಿಮ್ಮ ಕನಸುಗಳಿಗೆ ರೆಕ್ಕೆ ನೀಡಿ’ ಎಂಬುದು ಈ ಕಾರ್ಯಕ್ರಮದ ‘ಥೀಮ್’ ಆಗಿದೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳೊಂದಿಗೆ 700 ಶಿಕ್ಷಕರೂ ಪ್ರದರ್ಶನ ವೀಕ್ಷಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.