ADVERTISEMENT

ಬಿಜೆಪಿ ಗೆದ್ದರೆ ಸಂವಿಧಾನವನ್ನು ಬದಲಿಸುತ್ತದೆ: ಅಖಿಲೇಶ್

ಪಿಟಿಐ
Published 15 ಏಪ್ರಿಲ್ 2024, 13:44 IST
Last Updated 15 ಏಪ್ರಿಲ್ 2024, 13:44 IST
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಅಖಿಲೇಶ್ ಯಾದವ್
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಅಖಿಲೇಶ್ ಯಾದವ್   

ಲಖನೌ: ದೇಶದ ಸಂವಿಧಾನ ಬದಲಿಸಲು ಮತ್ತು ಮೀಸಲಾತಿಗೆ ಅಂತ್ಯ ಹಾಡಲು ಬಿಜೆಪಿ 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಘೋಷವಾಕ್ಯ ಮೊಳಗಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಹೇಳಿದ್ದಾರೆ.

ಚುನಾವಣಾ ಬಾಂಡ್ ವಿಚಾರವಾಗಿಯೂ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅಖಿಲೇಶ್, ಇ.ಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಬಳಸಿಕೊಂಡು ಭಯ ಹುಟ್ಟಿಸುವ ಮೂಲಕ ಕಾರ್ಪೊರೇಟ್ ಸಂಸ್ಥೆಗಳಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಲಾಗಿದೆ ಎಂದು ಗುಡುಗಿದರು.

ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಇರಲು ₹400 ಕೋಟಿ, ₹1,000 ಕೋಟಿ ಮತ್ತು ₹600 ಕೋಟಿ ಹಣವನ್ನ ಸುಲಿಗೆ ಮಾಡಲಾಗಿದೆ ಎಂದಿದ್ದಾರೆ.

ADVERTISEMENT

‘400ಕ್ಕೂ ಅಧಿಕ ಸ್ಥಾನ ಗೆಲ್ಲುವ ಘೋಷವಾಕ್ಯವನ್ನು ಸಂವಿಧಾನ ಬದಲಿಸುವ ಉದ್ದೇಶದಿಂದ ನೀಡಲಾಗಿದೆ. ಬಿಜೆಪಿ ಗೆದ್ದರೆ ಅವರು ಸಂವಿಧಾನವನ್ನಷ್ಟೇ ಬದಲಿಸುವುದಿಲ್ಲ. ಮೀಸಲಾತಿಯನ್ನೂ ಅಂತ್ಯಗೊಳಿಸುತ್ತಾರೆ. ನಿಮ್ಮ ಮತದಾನದ ಹಕ್ಕನ್ನೂ ಕಸಿಯುತ್ತಾರೆ’ಎಂದು ಮುಜಾಫರ್‌ನಗರದಲ್ಲಿ ಎಸ್‌ಪಿ ಅಭ್ಯರ್ಥಿ ಹರೇಂದ್ರ ಮಲಿಕ್ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು.

‘10 ವರ್ಷಗಳಲ್ಲಿ ದೇಶದಲ್ಲಿ 1 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಮೃತಪಟ್ಟ ರೈತರಿಗೂ ಯಾವುದೇ ಪರಿಹಾರ ಕೊಟ್ಟಿಲ್ಲ’ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರ ಕೈಗಾರಿಕೋದ್ಯಮಿಗಳ ಪರವಾಗಿದೆ ಎಂದು ಆರೋಪಿಸಿದ ಯಾದವ್, ಕೈಗಾರಿಕೋದ್ಯಮಿಗಳ ₹15 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಬಿಜೆಪಿ ಸರ್ಕಾರ, ರೈತರ ₹2 ಲಕ್ಷ ಕೋಟಿ ಸಾಲವನ್ನು ಏಕೆ ಮನ್ನಾ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡಲಾಗುವುದು ಎಂದು ಅಖಿಲೇಶ್ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.