ಮುಂಬೈ: ‘ವಿದ್ಯಾರ್ಥಿಗಳು ಯಾವುದೇ ದೇಶ ವಿರೋಧಿ ಚಟುವಟಿಕೆ ಪಾಲ್ಗೊಳ್ಳುವುದಾಗಲಿ, ಕಾಲೇಜು ಆವರಣದಲ್ಲಿ ಕರಪತ್ರಗಳನ್ನು ಹಂಚುವುದಾಗಲಿ ಮಾಡಬಾರದು’ ಎಂದು ಐಐಟಿ ಬಾಂಬೆ ಸುತ್ತೋಲೆಯನ್ನು ಹೊರಡಿಸಿದೆ.
ವಿದ್ಯಾರ್ಥಿ ವ್ಯವಹಾರಗಳ ಸಹಾಯಕ ಡೀನ್ ಅವರುಇ–ಮೇಲ್ ಮೂಲಕ ಈ ಸುತ್ತೋಲೆಯನ್ನು ಕಳುಹಿಸಿದ್ದು, ಒಟ್ಟು 15 ನಿಯಮಗಳನ್ನು ಇದರಲ್ಲಿ ಪಟ್ಟಿಮಾಡಲಾಗಿದೆ.
‘ಹಾಸ್ಟೆಲ್ನ ಶಾಂತ ವಾತಾವರಣ ಹದಗೆಡಿಸುವ ನಾಟಕ, ಸಂಗೀತಾ ಮತ್ತು ಭಾಷಣ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಹಾಸ್ಟೆಲ್ ಮೇಲ್ವಿಚಾರಕರ ಅಥವಾ ಡೀನ್ ಅನುಮತಿಯಿಲ್ಲದೆ ಹಾಸ್ಟೆಲ್ನಲ್ಲಿ ಯಾವುದೇ ಪೋಸ್ಟರ್ ಅಥವಾ ಕರಪತ್ರ ಹಂಚುವಂತಿಲ್ಲ’ ಎಂಬನಿಯಮಗಳನ್ನು ಸತ್ತೋಲೆ ಒಳಗೊಂಡಿದೆ.
‘ಕಾಂಪಸ್ನಲ್ಲಿಡೀನ್ ಒಪ್ಪಿಗೆ ಪಡೆದ ವಿಷಯಗಳಿಗಷ್ಟೇಅನುಮತಿ ಇರುತ್ತದೆ. ತಕ್ಷಣದಿಂದ ಜಾರಿಗೆ ಬರುವ ಈ ನಿಯಮಗಳನ್ನು ಉಲ್ಲಂಘಿಸುವ ವಿದ್ಯಾರ್ಥಿಗಳನ್ನು, ಹಾಸ್ಟೆಲ್ನಿಂದ ಭಾಗಶಃ ಅಥವಾ ಶಾಶ್ವತವಾಗಿ ಅಮಾನತು ಮಾಡಲಾಗುತ್ತದೆ’ ಎಂಬ ಎಚ್ಚರಿಕೆಯನ್ನು ಸುತ್ತೋಲೆಯಲ್ಲಿ ನೀಡಲಾಗಿದೆ.
ಕಾಲೇಜಿನ ಈ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು,‘ದೇಶದಾದ್ಯಂತ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಐಐಟಿ ಬಾಂಬೆ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದರಿಂದ,ಧ್ವನಿ ಅಡಗಿಸುವುದಕ್ಕಾಗಿಈ ರೀತಿಯ ನಿಯಮಗಳನ್ನು ಮಾಡಲಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಯಾವುದು ದೇಶ ವಿರೋಧಿ, ಸಮಾಜ ವಿರೋಧಿ ಚಟುವಟಿಕೆ ಎಂಬುದರ ಬಗ್ಗೆ ಸರಿಯಾದ ಸ್ಪಷ್ಟತೆ ಇಲ್ಲ. ಯಾವುದಕ್ಕೆ ಅನುಮತಿ ಇದೆ, ಯಾವುದಕ್ಕೆ ಇಲ್ಲ ಎಂಬುದನ್ನು ನಾನು ಇನ್ನೂ ಅರ್ಥ ಮಾಡಿಕೊಳ್ಳುತ್ತಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವನ್ನು ಕಾಲೇಜು ಆಡಳಿತ ಮಂಡಳಿ ಮಾಡುತ್ತಿರುವುದು ಅತ್ಯಂತ ಬೇಸರದ ಸಂಗತಿ’ ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.