ಅಮರಾವತಿ: ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷದಲ್ಲಿ (ಟಿಡಿಪಿ) ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ವಿಜಯವಾಡದಲ್ಲಿ ಟಿಡಿಪಿ ಮುಖಂಡರೊಬ್ಬರು ಇಂದು (ಭಾನುವಾರ) ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರ ಕಟೌಟ್ಗೆ ರಕ್ತದಿಂದ ಅಭಿಷೇಕ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.
‘ಬುಡ್ಡ ವೆಂಕಣ್ಣ’ ಎಂದೇ ಖ್ಯಾತರಾದ ಬಿ. ವೆಂಕಟೇಶ್ವರ್ ರಾವ್ ಅವರು ರಕ್ತದಾನ ಶಿಬಿರದಲ್ಲಿ ಸ್ವತಃ ತಮ್ಮ ರಕ್ತವನ್ನೇ ಬಾಟಲಿನಲ್ಲಿ ಸಂಗ್ರಹಿಸಿ, ನಾಯ್ಡು ಅವರ ಕಟೌಟ್ಗೆ ಅಭಿಷೇಕ ಮಾಡಿದ್ದಾರೆ. ಬಳಿಕ ಅದೇ ರಕ್ತವನ್ನು ಬಳಸಿ ತಮ್ಮ ಮನೆಯ ಗೋಡೆಯ ಮೇಲೆ ‘ಸಿಬಿಎನ್ (ಚಂದ್ರಬಾಬು ನಾಯ್ಡು) ಜಿಂದಾಬಾದ್, ನನ್ನ ಜೀವನ’ ಎಂದು ಬರೆದಿದ್ದಾರೆ.
‘ಚಂದ್ರಬಾಬು ನಾಯ್ಡು ಅವರು ನನ್ನ ಪಾಲಿನ ದೇವರು. ಅವರ ಮೇಲಿನ ಪ್ರೀತಿ ಮತ್ತು ಅಭಿಮಾನಕ್ಕಾಗಿ ರಕ್ತದಿಂದ ಅಭಿಷೇಕ ಮಾಡಿದ್ದೇನೆ. ನಾಯ್ಡು ಮೇಲಿರುವ ನನ್ನ ಭಕ್ತಿಗೆ ಇದೇ ನಿದರ್ಶನ. ಇದು ಭಕ್ತಿಯ ಪ್ರದರ್ಶನವೇ ಹೊರತು ಬಂಡಾಯವಲ್ಲ’ ಎಂದು ವೆಂಕಣ್ಣ ತಿಳಿಸಿದ್ದಾರೆ.
‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾಯ್ಡು ಅವರು ಗೆದ್ದು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳಬೇಕು. ನಾನು ಕೂಡ ವಿಜಯವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ ಅಥವಾ ಅನಕಪಲ್ಲಿ ಲೋಕಸಭಾ ಕ್ಷೇತ್ರದ ಟಿಕೆಟ್ಗೆ ಬೇಡಿಕೆಯಿಟ್ಟಿದ್ದೇನೆ. ಆದರೆ, ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಟಿಡಿಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಫೆಬ್ರುವರಿ 20ರೊಳಗೆ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.