ಮುಂಬೈ: ಭೀಮಾ ಕೋರೆಗಾಂವ್ನಲ್ಲಿ 2018ರಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಕೆಲವು ಹೋರಾಟಗಾರರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
‘ಗಲಭೆಗೆ ಸಂಬಂಧಿಸಿದಂತೆ ಕೆಲವರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ದೂರು ದಾಖಲಿಸಲಾಗಿದೆ. ಅಂಥವರಿಗೆ ಪ್ರಕರಣದಿಂದ ಮುಕ್ತಿ ನೀಡಲು ಮಹಾ ವಿಕಾಸ ಆಘಾಡಿ ನೇತೃತ್ವದ ಸರ್ಕಾರ ಬಯಸುತ್ತದೆ’ ಎಂದು ಎನ್ಸಿಪಿ ಮುಖಂಡ, ಸಚಿವ ಜಯಂತ ಪಾಟೀಲ್ ಬುಧವಾರ ಹೇಳಿದ್ದಾರೆ.
‘ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ, ದೂರನ್ನು ವಾಪಸ್ ಬಡೆಯಬೇಕು ಎಂದು ಹಲವರು ನಮಗೆ ಮನವಿ ಸಲ್ಲಿಸಿದ್ದಾರೆ. ಯಾರಿಗೂ ಅನ್ಯಾಯ ಆಗಬಾರದು ಎಂಬುದು ಸರ್ಕಾರದ ಉದ್ದೇಶ. ಯಾರಿಗೂ ತೊಂದರೆ ಕೊಡಲು ನಾವು ಬಯಸುವುದಿಲ್ಲ. ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಳಿಯೇ ಇದೆ’ ಎಂದು ಪಾಟೀಲ್ ಹೇಳಿದ್ದಾರೆ.
ಮಾವೊ ವಾದಕ್ಕೆ ಬೆಂಬಲ– ಬಿಜೆಪಿ ಟೀಕೆ: ‘ಭೀಮಾ ಕೋರೆಗಾಂವ್ ಗಲಭೆ ಕುರಿತ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದೆಂದರೆ ಮಾವೋ ವಾದಿಗಳಿಗೆ ಮುಕ್ತವಾಗಿ ಬೆಂಬಲ ನೀಡಿದಂತೆ’ ಎಂದು ಬಿಜೆಪಿ ವಕ್ತಾರ ಮಾಧವ ಭಂಡಾರಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.