ಪುಣೆ: ‘ಹಿಂದೂ ರಾಷ್ಟ್ರದಲ್ಲಿ ಪ್ರಾರ್ಥನೆ ಸಲ್ಲಿಸಲು ಧ್ವನಿವರ್ಧಕ ಸಿಗುವುದಿಲ್ಲ. ಹಿಂದೂಗಳ ವಿರುದ್ಧ ಮಾತನಾಡಿದರೆ ಸುಮ್ಮನಿರುವುದಿಲ್ಲ’ ಎಂದು ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾಸಿಂಗ್ ಬೆದರಿಕೆ ಹಾಕಿದ್ದಾರೆ.
ಈ ಮಾತುಗಳ ಮೂಲಕ ಮುಸಲ್ಮಾನರ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಅವರ ದ್ವೇಷ ಭಾಷಣ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಆಸ್ಪದವಾಗಿದೆ. ಸಿಂಗ್ ಅವರು ಸದ್ಯ ಪಕ್ಷದಿಂದ ಅಮಾನತುಗೊಂಡಿದ್ದಾರೆ.
ಈಚೆಗೆ ಅಹ್ಮದ್ನಗರ ಜಿಲ್ಲೆಯ ರಹತ ತಾಲ್ಲೂಕಿನಲ್ಲಿ ನಡೆದಿದ್ದ, ಬಹುತೇಕ ಯುವಜನರೇ ಭಾಗವಹಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಹೀಗೆ ಮುಸಲ್ಮಾನರನ್ನು ಗುರಿಯಾಗಿಸಿ ದ್ವೇಷ ಭಾಷಣ ಮಾಡಿದ್ದಾರೆ.
ಅವಾಚ್ಯ ಪದದ ಮೂಲಕ ಮುಸಲ್ಮಾನರನ್ನು ಉಲ್ಲೇಖಿಸಿ, ‘ಅವರಿಗೆ ಹೊಡೆಯಬೇಕು ಎನಿಸಿದರೆ ಭಜರಂಗ ದಳಕ್ಕೆ ಸೇರ್ಪಡೆಯಾಗಿ. ಹಿಂದೂ ರಾಷ್ಟ್ರವಾಗಿ ರೂಪಿಸಲು ಬೆಂಬಲ ನೀಡಿ’ ಎಂದು ಯುವಜನರಿಗೆ ಕರೆ ನೀಡಿದ್ದರು.
‘ಛತ್ರಪತಿ ಶಿವಾಜಿ ಮಹಾರಾಜರ ಸೇನೆಯು ಸಿದ್ಧವಿದೆ ಎಂಬುದು ಅವರಿಗೂ ಗೊತ್ತಾಗಲಿ. ಹಿಂದೂ ರಾಷ್ಟ್ರದ ವಿರುದ್ಧ ಮಾತನಾಡುವವರು, ಗೋವು ಕಡಿಯುವವರಿಗೆ ನಾವು ಸಜ್ಜಾಗಿದ್ದೇವೆ ಎಂಬುದೂ ತಿಳಿಯಲಿ. 2026ರ ವೇಳೆಗೆ ‘ಅಖಂಡ ಹಿಂದೂ ರಾಷ್ಟ್ರ’ ಘೋಷಣೆಯಾಗಬೇಕು’ ಎಂದು ಸಿಂಗ್ ಹೇಳಿರುವುದು ವಿಡಿಯೊದಲ್ಲಿದೆ.
ಸಿಂಗ್ ಅವರು ಕೋಮುಪ್ರಚೋದಿತ ಭಾಷಣಗಳಿಂದಲೇ ಕುಖ್ಯಾತರಾಗಿದ್ದಾರೆ. ಪ್ರವಾದಿ ಮಹಮ್ಮದ್ ವಿರುದ್ಧ ಹೇಳಿಕೆಗಾಗಿ ಕಳೆದ ವರ್ಷ ಅವರನ್ನು ಬಂಧಿಸಲಾಗಿತ್ತು. ಬಳಿಕ ಪಕ್ಷದಿಂದ ಬಿಜೆಪಿ ಅವರನ್ನು ಅಮಾನತುಪಡಿಸಿತ್ತು.
ಈಗಿನ ದ್ವೇಷಭಾಷಣ ಕುರಿತಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಲಾತೂರ್ನ ಪೊಲೀಸ್ ವರಿಷ್ಠಾಧಿಕಾರಿ ಸಮಯ್ ಮುಂಡೆ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.