ಮುಂಬೈ: ಮಹಾರಾಷ್ಟ್ರ ಸಚಿವರಾದ ಆದಿತ್ಯ ಠಾಕ್ರೆ ಹಾಗೂ ಅನಿಲ್ ಪರಬ್ ಅವರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.
ಆದಿತ್ಯ ಠಾಕ್ರೆ ಹಾಗೂ ಅನಿಲ್ ಪರಬ್ ಆಪ್ತರು ಮುಂಬೈ, ಪುಣೆಗಳಲ್ಲಿ ಹೊಂದಿರುವ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.
ಮಹಾವಿಕಾಸ್ ಆಘಾಡಿ (ಎಂವಿಎ) ಸರ್ಕಾರದಲ್ಲಿ ಆದಿತ್ಯ ಠಾಕ್ರೆ ಅವರು ಪರಿಸರ ಹಾಗೂ ಪ್ರವಾಸೋದ್ಯಮ ಸಚಿವರಾಗಿದ್ದು, ಅನಿಲ್ ಪರಬ್ ಸಾರಿಗೆ ಮಂತ್ರಿ.
‘ಶಿವಸೇನಾ ಮುಖಂಡ ಹಾಗೂ ಶಿರಡಿ ಟ್ರಸ್ಟ್ನ ಸದಸ್ಯ ರಾಹುಲ್ ಕನಾಲ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಹುಲ್, ಆದಿತ್ಯ ಠಾಕ್ರೆ ಅವರ ಆಪ್ತ ಎನ್ನಲಾಗಿದೆ.
‘ಕೇಬಲ್ ಆಪರೇಟರ್ ಆಗಿರುವ ಸದಾನಂದ ಕದಂ, ಬಜರಂಗ ಖರ್ಮಾಟೆ ಅವರಿಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ. ಈ ಇಬ್ಬರು, ಸಚಿವ ಅನಿಲ್ ಪರಬ್ ಅವರ ಆಪ್ತರು ಎನ್ನಲಾಗಿದೆ’ ಎಂದು ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.