ADVERTISEMENT

ನದಿಗಳ ಮಾಲಿನ್ಯ ನಿಯಂತ್ರಣಕ್ಕೆ ಸಹಕಾರ: ಭಾರತ, ಬಾಂಗ್ಲಾದೇಶ ಸಮ್ಮತಿ

ಪಿಟಿಐ
Published 17 ಮಾರ್ಚ್ 2021, 8:00 IST
Last Updated 17 ಮಾರ್ಚ್ 2021, 8:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ನದಿ ನೀರು ಹಂಚಿಕೆ, ಮಾಲಿನ್ಯ ನಿಯಂತ್ರಣ, ತೀರಗಳ ಸಂರಕ್ಷಣೆ, ಪ್ರವಾಹ ಪರಿಸ್ಥಿತಿ ನಿರ್ವಹಣೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಸಹಕಾರ ನೀಡಲು ಭಾರತ ಹಾಗೂ ಬಾಂಗ್ಲಾದೇಶ ಸಮ್ಮತಿಸಿವೆ ಎಂದು ಬುಧವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತ–ಬಾಂಗ್ಲಾದೇಶ ಜಲಸಂಪನ್ಮೂಲ ಕಾರ್ಯದರ್ಶಿಗಳ ಮಟ್ಟದ ಸಭೆ ಮಾರ್ಚ್‌ 16ರಂದು ನಡೆಯಿತು. ಜಂಟಿ ನದಿಗಳ ಆಯೋಗದ ನಿಯಮಗಳ ಚೌಕಟ್ಟಿನೊಳಗೆ ನಡೆದ ಸಭೆಯಲ್ಲಿ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಿತು ಎಂದೂ ಪ್ರಕಟಣೆ ತಿಳಿಸಿದೆ.

ಭಾರತ ಮತ್ತು ಬಾಂಗ್ಲಾದೇಶಗಳ ಮೂಲಕ 54 ನದಿಗಳು ಹರಿಯುತ್ತಿವೆ. ಎರಡೂ ದೇಶಗಳಲ್ಲಿರುವ ಲಕ್ಷಾಂತರ ಜನರ ಜೀವನೋಪಾಯ ಈ ನದಿಗಳನ್ನು ಅವಲಂಬಿಸಿದೆ. ಇದೇ ಕಾರಣಕ್ಕೆ, ನದಿಗಳ ನೀರು ಹಂಚಿಕೆ, ನದಿ ಪಾತ್ರಗಳ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಮೊದಲಿನಂದಲೂ ಉಭಯ ದೇಶಗಳ ನಡುವೆ ಸಹಕಾರ ಇದೆ.

ADVERTISEMENT

ಕಾರ್ಯದರ್ಶಿಗಳ ಮಟ್ಟದ ಮುಂದಿನ ಸಭೆಯನ್ನು ಢಾಕಾದಲ್ಲಿ ಆಯೋಜನೆ ಮಾಡಲು ಉಭಯ ದೇಶಗಳ ನಿಯೋಗಗಳು ಸಮ್ಮತಿಸಿದವು.

ಜಲಸಂಪನ್ಮೂಲ, ನದಿಗಳ ಅಭಿವೃದ್ಧಿ ಹಾಗೂ ಗಂಗಾ ಪುನಶ್ಚೇತನ ಸಚಿವಾಲಯದ ಕಾರ್ಯದರ್ಶಿ ಪಂಕಜಕುಮಾರ್‌ ಭಾರತದ ನಿಯೋಗದ ನೇತೃತ್ವ ವಹಿಸಿದ್ದರು.

ಜಲಸಂಪನ್ಮೂಲ ಸಚಿವಾಲಯದ ಹಿರಿಯ ಕಾರ್ಯದರ್ಶಿ ಕಬೀರ್‌ ಬಿನ್‌ ಅನ್ವರ್‌ ಅವರು ಬಾಂಗ್ಲಾದೇಶದ ನಿಯೋಗದ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.