
ಪ್ರಧಾನಿ ಮೋದಿ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಸಂಸತ್ತಿನ ಎದುರು ಗುರುವಾರ ಮಾತನಾಡಿದರು. ಕೇಂದ್ರ ಸಚಿವರಾದ ಕಿರಣ್ ರಿಜುಜು, ಅರ್ಜುನ್ ರಾಮ್ ಮೇಘವಾಲ್ ಮತ್ತು ಎಲ್. ಮುರುಗನ್ ಇದ್ದರು –ಪಿಟಿಐ ಚಿತ್ರ
ನವದೆಹಲಿ/ಕೋಲ್ಕತ್ತ: ‘ಐರೋಪ್ಯ ಒಕ್ಕೂಟದೊಂದಿಗೆ ನಾವು ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದದಿಂದ (ಎಫ್ಟಿಎ) ಭಾರತವು ವಿಶ್ವಮಟ್ಟದಲ್ಲಿ ‘ಭರವಸೆಯ ಕಿರಣ’ವಾಗಿ ಪ್ರಕಾಶಿಸುವುದಕ್ಕೆ ಆರಂಭಿಸಿದೆ. ದೇಶದ ಉತ್ಪಾದಕರು ಈ ಅವಕಾಶವನ್ನು ಬಾಚಿಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು.
ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಸಂಸತ್ತಿನ ಎದುರು ಮಾಧ್ಯಮಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ಮಹತ್ವಾಕಾಂಶೆಯ ಭಾರತ’ವು ಈ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು. ಸುಧಾರಣಾವಾದಿ ಎಕ್ಸ್ಪ್ರೆಸ್ನಲ್ಲಿ ಭಾರತವು ಅತಿವೇಗವಾಗಿ ಮುನ್ನುಗ್ಗುತ್ತಿದೆ. ಇದಕ್ಕೆ ಸಹಕರಿಸಿದ ಎಲ್ಲ ಸಂಸದರಿಗೂ ಧನ್ಯವಾದ’ ಎಂದರು.
‘ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನುಕೂಲಗಳು ತಲುಪುವಂತೆ ಮಾಡಿದ್ದೇವೆ ಎನ್ನುವುದನ್ನು ನಮ್ಮ ಸರ್ಕಾರದ ಕಡು ಟೀಕಾಕಾರರೂ ಒಪ್ಪಿಕೊಳ್ಳುತ್ತಾರೆ. ಇನ್ನಷ್ಟು ಆಧುನಿಕ ಸುಧಾರಣೆಗಳೊಂದಿಗೆ ನಮ್ಮ ಈ ಉದ್ದೇಶ ಸಾಧನೆಗೆ ಮುಂದುವರಿಯುತ್ತೇವೆ’ ಎಂದರು.
‘ಈ ಬಜೆಟ್ ಅಧಿವೇಶನವು 21ನೇ ಶತಮಾನದ ಮೊದಲ ತ್ರೈಮಾಸಿಕದ ಮುಕ್ತಾಯ ಮತ್ತು ಮುಂದಿನ ತ್ರೈಮಾಸಿಕದ ಆರಂಭ. ಆತ್ಮವಿಶ್ವಾಸ ತುಂಬಿರುವ ನಮ್ಮ ಭಾರತವು ಈ ವರ್ಷವನ್ನು ಬಹಳ ಸಕಾರಾತ್ಮಕ ವಿಚಾರಗಳೊಂದಿಗೆ ಆರಂಭಿಸಿದೆ. ವಿಶ್ವದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ’ ಎಂದು ಹೇಳಿದರು.
‘ಐರೋಪ್ಯ ಒಕ್ಕೂಟದೊಂದಿಗೆ ಮಾಡಿಕೊಂಡಿರುವ ಈ ಅತ್ಯಂತ ದೊಡ್ಡ ಒಪ್ಪಂದದಿಂದ ವಿಸ್ತಾರವಾದ ಮಾರುಕಟ್ಟೆ ತೆರೆದುಕೊಳ್ಳಲಿದೆ ಮತ್ತು ಭಾರತದ ವಸ್ತುಗಳು ಅತ್ಯಂತ ಕಡಿಮೆ ಬೆಲೆಗೆ ಗ್ರಾಹಕರನ್ನು ತಲುಪಲಿವೆ. ಈ ಒಪ್ಪಂದವನ್ನು ದೇಶದ ಯುವಕರಿಗಾಗಿ ಮತ್ತು ಆತ್ಮನಿರ್ಭರ ಭಾರತಕ್ಕಾಗಿ ಮಾಡಿಕೊಳ್ಳಲಾಗಿದೆ’ ಎಂದರು.
ಮೋದಿ ಹೇಳಿದ್ದು...
* ಉತ್ತಮ ಗುಣಮಟ್ಟದ ಉತ್ಪನ್ನಗಳು ಮಾರುಕಟ್ಟೆಯನ್ನು ಪ್ರವೇಶಿಸಿದರೆ ಅದು ಕೇವಲ ಲಾಭವನ್ನು ಮಾತ್ರ ತಂದುಕೊಡುವುದಿಲ್ಲ. ಐರೋಪ್ಯ ಒಕ್ಕೂಟದ 24 ದೇಶಗಳ ಜನರ ಹೃದಯವನ್ನೂ ಗೆಲ್ಲುತ್ತದೆ. ಇದು ದಶಕಗಳವರೆಗೆ ಉತ್ತಮ ಬಾಂಧವ್ಯವನ್ನು ಸೃಷ್ಟಿಸುತ್ತದೆ. ದೇಶದ ಬ್ರ್ಯಾಂಡ್ನೊಂದಿಗೆ ವಿದೇಶಗಳ ಮಾರುಕಟ್ಟೆಗೆ ಲಗ್ಗೆ ಇಡುವ ಕಂಪನಿಗಳ ಬ್ರ್ಯಾಂಡ್ಗಳು ಘನತೆಯನ್ನು ಪಡೆದುಕೊಳ್ಳಲಿದೆ
* ನಿರ್ಮಲಾ ಸೀತಾರಾಮನ್ ಅವರು ತಮ್ಮ 9ನೇ ಬಜೆಟ್ ಅನ್ನು ಭಾನುವಾರ ಮಂಡಿಸಲಿದ್ದಾರೆ. ಸತತವಾಗಿ 9 ಬಜೆಟ್ ಮಂಡಿಸುತ್ತಿರುವ ದೇಶದ ಪ್ರಥಮ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೇಶದ ಮಟ್ಟಿಗೆ ಇದೊಂದು ಪ್ರಮುಖ ಹೆಜ್ಜೆ. ಭಾರತದ ಪ್ರಜಾಪ್ರಭುತ್ವದಲ್ಲಿ ಇದು ಅದ್ಬುತ ಅಧ್ಯಾಯ
‘ನಾವು ಅಮೆರಿಕದ ಮೇಲೆ ಅವಲಂಬಿತರಾಗಿಲ್ಲ’ ‘
ಐರೋಪ್ಯ ಒಕ್ಕೂಟ ಮತ್ತು ಭಾರತದ ಮಧ್ಯೆ ನಡೆದಿರುವ ಒಪ್ಪಂದವು ಅಮೆರಿಕದ ಪ್ರಾಬಲ್ಯದ ಮಧ್ಯೆ ನಾವು ಮಾಡಿಕೊಂಡ ರಕ್ಷಣಾತ್ಮಕ ಕಾರ್ಯತಂತ್ರ. ಅಮೆರಿಕದವರು ತಿಳಿದುಕೊಂಡಷ್ಟು ನಾವು ಅವರ ಮೇಲೆ ಅವಲಂಬಿತರಾಗಿಲ್ಲ ಎನ್ನುವ ಸಂದೇಶವನ್ನು ಈ ಒಪ್ಪಂದವು ಅಮೆರಿಕಕ್ಕೆ ರವಾನಿಸಿದೆ’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಅಭಿಪ್ರಾಯಪಟ್ಟರು. ‘ಪಿಟಿಐ’ ಸುದ್ದಿಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಅವರು ಮಾತನಾಡಿ ‘ಅದೇನೇ ಇದ್ದರೂ ಈ ಒಪ್ಪಂದದ ಕುರಿತು ಹೇಳಲಾಗುತ್ತಿರುವ ಎಲ್ಲ ಲಾಭಗಳು ನಮಗೆ ದಕ್ಕಬೇಕು ಎಂದಾದರೆ ನಾವು ನಮ್ಮ ದಕ್ಷತೆಯನ್ನು ಮತ್ತು ಸಾರಿಗೆ ಪೂರೈಕೆ ವ್ಯವಸ್ಥೆಯನ್ನು ತೀವ್ರಗತಿಯಲ್ಲಿ ಉತ್ತಮಪಡಿಸಿಕೊಳ್ಳಬೇಕಾಗಿದೆ’ ಎಂದರು. ‘ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯಾಕೆ ಭಾರತ ವಿರೋಧಿಯಾಗಿದ್ದಾರೆ ಎಂದು ನಮಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ನಮ್ಮ ಜೊತೆಯಲ್ಲಿ ವ್ಯಾಪಾರ ನಡೆಸಲು ಅವರೇನು ಆಸಕ್ತಿ ತೋರುತ್ತಿಲ್ಲ. ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದೇನೆ ಒಪ್ಪಂದಕ್ಕೆ ಬರಲಾಗುವುದು ಎಂದು ಟ್ರಂಪ್ ಹೇಳುತ್ತಾರೆ. ಆಮೇಲೆ ಇದನ್ನು ನಿರಾಕರಿಸುತ್ತಾರೆ. ಅಮೆರಿಕದೊಂದಿಗಿನ ಸಮಸ್ಯೆ ಏನು ಎಂಬುದೇ ನಮಗೆ ಅರ್ಥವಾಗುತ್ತಿಲ್ಲ’ ಎಂದರು. ‘ಭಾರತವು ದೊಡ್ಡ ಮಾರುಕಟ್ಟೆ. ಐರೋಪ್ಯ ದೇಶಗಳ ಮಾರುಕಟ್ಟೆಯು ಐಷಾರಾಮಿ ವಸ್ತುಗಳು ಯಂತ್ರಗಳ ಮಾರುಕಟ್ಟೆ. ಆದರೆ ಅಮೆರಿಕದ ಮಾರುಕಟ್ಟೆಯು ಈ ಯಾವ ಮಾರುಕಟ್ಟೆಗೂ ಸಮವಲ್ಲ; ಅದೊಂದು ದೈತ್ಯ ಮಾರುಕಟ್ಟೆ. ಅದೇನೇ ಇದ್ದರೂ ಈ ಒಪ್ಪಂದದ ಯಶಸ್ಸು ಭಾರತವು ಯಾವ ರೀತಿಯಲ್ಲಿ ಅನುಕೂಲ ಪಡೆದುಕೊಳ್ಳಲಿದೆ ಎಂಬುದರ ಮೇಲೆ ನಿಂತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.