ವಾಷಿಂಗ್ಟನ್: ರಷ್ಯಾ – ಉಕ್ರೇನ್ ಯುದ್ಧದಂತಹ ಸಮಯದಲ್ಲಿ ವಿಶ್ವವು ಆಹಾರಧಾನ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಆದರೆ ಆಹಾರ ಧಾನ್ಯಗಳನ್ನು ಪೂರೈಸುವ ಸಾಮರ್ಥ್ಯವಿದ್ದರೂ ವಿಶ್ವ ವ್ಯಾಪಾರ ಸಂಘಟನೆಯಿಂದಭಾರತದಂತಹ ದೇಶಗಳು ತೊಂದರೆ ಎದುರಿಸುತ್ತಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಅಂತರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್ನ ಜಂಟಿ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದ ಸಚಿವೆ ನಿರ್ಮಲಾ, ‘ವಿಶ್ವ ವ್ಯಾಪಾರ ಸಂಘಟನೆಗಳ ಮಹಾನಿರ್ದೇಶಕ ಎನ್ಗೋಜಿ ಒಕೊಂಜಾ ಇವಾಲಾ ಅವರು, ಆಹಾರ ಕೊರತೆಯನ್ನು ಅನುಭವಿಸುತ್ತಿರುವ ದೇಶಗಳಿಗೆ ಭಾರತವು ಧಾನ್ಯಗಳನ್ನು ಪೂರೈಸುವುದರ ಕುರಿತು ಸಕಾರಾತ್ಮಕವಾಗಿ ಯೋಚಿಸಲಾಗುವುದು ಎಂಬುದಾಗಿ ತಿಳಿಸಿದ್ದಾರೆ’ ಎಂದು ಭಾರತದ ಪತ್ರಕರ್ತರಿಗೆ ತಿಳಿಸಿದರು.
‘ಡಬ್ಲ್ಯುಟಿಒದ ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ. ಆಹಾರ ಧಾನ್ಯಗಳಿಗೆ ಸಂಬಂಧಿಸಿದಂತೆ ದಶಕಗಳಿಂದ ನಮ್ಮನ್ನು ಕಟ್ಟಿಹಾಕಿದ್ದ ನಿರ್ಬಂಧ ಗಳನ್ನು ಭಾರತ ಮುರಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಇದರಿಂದ ನಮ್ಮ ರೈತರಿಗೆ ಅನುಕೂಲವಾಗಲಿದೆ’ ಎಂದು ನಿರ್ಮಲಾ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಭಾರತ ಹಾಗೂ ಅಮೆರಿಕಾದ ಸಂಬಂಧದ ಬಗ್ಗೆ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ‘ಭಾರತ ಹಾಗೂ ಅಮೆರಿಕಾದ ದ್ವಿಪಕ್ಷೀಯ ಸಂಬಂಧವು ಮುಂದುವರಿದಿದ್ದು, ತುಂಬಾ ಗಾಢವಾಗಿದೆ. ಈ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.