
ಕೋಲ್ಕತ್ತ: ಭಾರತವು ಕಳೆದ ಎರಡು ದಶಕಗಳಲ್ಲಿ ವೇಗವಾಗಿ ಬೆಳವಣಿಗೆ ಹೊಂದಿದೆ. ಮಹತ್ವಾಕಾಂಕ್ಷಿ ದೇಶದಿಂದ ಸ್ಪೂರ್ತಿದಾಯಕ ರಾಷ್ಟ್ರವಾಗಿ ಬೆಳೆದಿದೆ ಎಂದು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸೋಮವಾರ ಹೇಳಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ 125ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ‘ಭಾರತ @ 2047; ಅಮೃತ ಕಾಲದಲ್ಲಿ ಆರ್ಥಿಕ ದೃಷ್ಟಿಕೋನ’ ಎನ್ನುವ ವಿಷಯದ ಕುರಿತು ಅವರು ಮಾತನಾಡಿದರು.
ಜಗತ್ತು ಕೋವಿಡ್ ಸಂಕ್ರಾಮಿಕ ಹಾಗೂ ಅಂತರರಾಷ್ಟ್ರೀಯ ರಾಜಕೀಯದ ಅಡಕತ್ತರಿಗೆ ಸಿಲುಕಿದ ಸಮಯದಲ್ಲೂ ಭಾರತವು ಬೆಳವಣಿಗೆ ಹೊಂದುತ್ತಿದೆ ಎಂದು ಹೇಳಿದ್ದಾರೆ.
ಕಳೆದ 10 ವರ್ಷಗಳಲ್ಲಿ ಭಾರತದ ಜಿಡಿಪಿ ಎರಡು ಪಟ್ಟು ಹೆಚ್ಚಾಗಿದೆ. ಈ ಸಾಧನೆ ಮಾಡಿದ ಏಕೈಕ ರಾಷ್ಟ್ರವಾಗಿದೆ. ಈ ಸಮಯದಲ್ಲಿ ದೇಶದ 25 ಕೋಟಿಗೂ ಅಧಿಕ ನಾಗರಿಕರನ್ನು ಬಡತನ ಮುಕ್ತ ಮಾಡಲಾಗಿದೆ. ಇದು ದೇಶದ ಇತಿಹಾಸದಲ್ಲಿ ನೆನಪಿಡಬೇಕಾದ ಸಾಧನೆಯಾಗಿದೆ ಎಂದು ಹೇಳಿದ್ದಾರೆ.
ಭಾರತವು ರಕ್ಷಣಾ ವಲಯದಲ್ಲಿ ಕೂಡ ಸ್ವಾವಲಂಬನೆ ಸಾಧಿಸುತ್ತಿದೆ. ಅತ್ಯಾಧುನಿಕ ಆಯುಧಗಳ ತಯಾರಿಕೆಯ ಜತೆಗೆ, 80ಕ್ಕೂ ಅಧಿಕ ದೇಶಗಳೊಂದಿಗೆ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ದೇಶದ ಬೆಳವಣಿಗೆಯ ದೃಷ್ಟಿಯಲ್ಲಿ ಮುಂದಿನ ಎರಡು ದಶಕಗಳು ತುಂಬಾ ಮಹತ್ವದ್ದಾಗಿದೆ. ಭಾರತವು ಡಿಜಿಟಲ್ ಅಳವಡಿಕೆದಾರ ಸ್ಥಾನದಿಂದ ಡಿಜಿಟಲ್ ನಾಯಕನ ಪಟ್ಟ ಪಡೆಯಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.