ಭಾರತ–ಪಾಕಿಸ್ತಾನ
– ಗೆಟ್ಟಿ ಚಿತ್ರ
ನವದೆಹಲಿ: ಜಮ್ಮುವಿನಲ್ಲಿ ಚಿನಾಬ್ ನದಿಗೆ ಅಡ್ಡಲಾಗಿ ಕಟ್ಟಿರುವ ಬಗಲಿಹಾರ್ ಅಣೆಕಟ್ಟೆಯಿಂದ ನೀರಿನ ಹರಿವನ್ನು ಭಾರತ ತಡೆಹಿಡಿದಿದೆ. ಅಲ್ಲದೆ, ಝೇಲಮ್ ನದಿಗೆ ಕಾಶ್ಮೀರದಲ್ಲಿ ಕಟ್ಟಿರುವ ಕಿಶನ್ಗಂಗಾ ಅಣೆಕಟ್ಟೆಯಿಂದಲೂ ನೀರಿನ ಹರಿವು ಸ್ಥಗಿತಗೊಳಿಸಲು ಚಿಂತನೆ ನಡೆಸಿದೆ.
ಪಹಲ್ಗಾಮ್ನಲ್ಲಿನ ಉಗ್ರರ ದಾಳಿ ಕೃತ್ಯದ ಬಳಿಕ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತಿನಲ್ಲಿ ಇಟ್ಟಿತ್ತು. ಅದರ ಹಿಂದೆಯೇ ಈಗ ಅಣೆಕಟ್ಟಯಿಂದ ನೀರಿನ ಹೊರ ಹರಿವನ್ನು ತಡೆಹಿಡಿದಿದೆ.
ಈ ಬೆಳವಣಿಗೆ ಕುರಿತಂತೆ ಅರಿವಿರುವ ಮೂಲಗಳ ಪ್ರಕಾರ, ಈ ಎರಡೂ ಅಣೆಕಟ್ಟೆಗಳಿಂದ ನೀರಿನ ಹೊರಹರಿವಿನ ಸಮಯವನ್ನು ನಿರ್ಧರಿಸುವ ಅಧಿಕಾರವನ್ನು ಭಾರತ ಹೊಂದಿದೆ.
ಸಿಂಧೂ ಮತ್ತು ಅದರ ಉಪನದಿಗಳ ನೀರಿನ ಹಂಚಿಕೆ ಸಂಬಂಧ ವಿಶ್ವಬ್ಯಾಂಕ್ನ ಮಧ್ಯಸ್ಥಿಕೆಯಲ್ಲಿ 1960ರಲ್ಲಿ ಭಾರತ–ಪಾಕಿಸ್ತಾನ ಈ ಒಪ್ಪಂದಕ್ಕೆ ಸಹಿ ಹಾಕಿದ್ದವು.
ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿಯೇ ಬಗಲಿಹಾರ್ ಅಣೆಕಟ್ಟೆ ನಿರ್ವಹಣೆ ಆಗಬೇಕು ಎಂದು ಪಾಕಿಸ್ತಾನ ಹಿಂದೆ ಒತ್ತಾಯಿಸಿತ್ತು. ಝೇಲಮ್ ಉಪನದಿ ನೀಲಂನಲ್ಲಿ ನೀರಿನ ಹರಿವಿನ ಮೇಲೆ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ಕಿಶನ್ಗಂಗಾ ಅಣೆಗಟ್ಟೆಯು ಕಾನೂನು, ರಾಜತಾಂತ್ರಿಕ ಪರಿಶೀಲನೆಗೆ ಒಳಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.