ಪಿಟಿಐ
ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿ ಪ್ರಕರಣಗಳನ್ನು ಭಾರತ ‘ನಿರಂತರವಾಗಿ ಗಮನಿಸುತ್ತಿದೆ’ ಮತ್ತು ‘ದಾಖಲೆ ಮಾಡಿಕೊಳ್ಳುತ್ತಿದೆ’ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿನಲ್ಲಿ ತಿಳಿಸಿದೆ.
‘ವ್ಯಕ್ತಿಗಳು, ಅವರ ಮನೆ, ಕಚೇರಿ, ದೇಗುಲಗಳ ಮೇಲೆ ನಡೆಯುತ್ತಿರುವ ದಾಳಿಯ ಮಾಹಿತಿ ಸಂಗ್ರಹಿಸಿದ್ದೇವೆ’ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
‘ಅಲ್ಲಿನ ಮಧ್ಯಂತರ ಸರ್ಕಾರ ಸಮಗ್ರ ತನಿಖೆ ಮಾಡುವ, ಅಮಾಯಕರನ್ನು ಕೊಂದವರ ವಿರುದ್ಧ ಕ್ರಮ ಕೈಗೊಂಡು ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವ ವಿಶ್ವಾಸ ಇದೆ’ ಎಂದಿದ್ದಾರೆ.
‘ಬಾಂಗ್ಲಾ ಹಿಂಸಾಚಾರ ಮತ್ತು ದಾಳಿಯಲ್ಲಿ ಎಷ್ಟು ಮಂದಿ ಹಿಂದೂಗಳು ಬಲಿಯಾಗಿದ್ದಾರೆ ಎಂಬ ಬಗ್ಗೆ ವಿದೇಶಾಂಗ ಇಲಾಖೆ ದಾಖಲೆ ನಿರ್ವಹಣೆ ಮಾಡುತ್ತಿದೆಯೇ? ಅಲ್ಲಿನ ಸರ್ಕಾರದ ಜತೆ ಚರ್ಚಿಸಿದೆಯೇ?’ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.
‘ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ನಿರಂತರವಾಗಿ ಬಾಂಗ್ಲಾದೇಶದ ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚಿಸಿದ್ದೇವೆ’ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.