ನವದೆಹಲಿ: ದೇಶವನ್ನು ನಕ್ಸಲ್ ಮುಕ್ತ ಮಾಡುವವರೆಗೂ ಮೋದಿಯವರ ಸರ್ಕಾರ ವಿರಮಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನಕ್ಸಲರು ಅಡಗಿದ್ದ ನೆಲೆಗಳನ್ನು ನಾಶಪಡಿಸುವ ಸಲುವಾಗಿ ಛತ್ತೀಸ್ಗಢದ ಕಾರೇಗುಟ್ಟದಲ್ಲಿ 'ಆಪರೇಷನ್ ಬ್ಲಾಕ್ ಫಾರೆಸ್ಟ್' ಅನ್ನು ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ಸಿಆರ್ಪಿಎಫ್, ಛತ್ತೀಸ್ಗಢ ಪೊಲೀಸ್, ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಹಾಗೂ ಕೋಬ್ರಾ ಪಡೆ ಭಾಗಿಯಾಗಿದ್ದರು ಎಂದು ತಿಳಿಸಿದರು.
'ಆಪರೇಷನ್ ಬ್ಲಾಕ್ ಫಾರೆಸ್ಟ್' ಕಾರ್ಯಾಚರಣೆಯಲ್ಲಿ ಯೋಧರು ತಮ್ಮ ಶೌರ್ಯವನ್ನು ಮೆರೆದಿದ್ದಾರೆ. ಈ ಕಾರ್ಯಾಚರಣೆಯು ನಕ್ಸಲರ ವಿರುದ್ಧ ನಡೆದ ಸುವರ್ಣ ಕ್ಷಣವಾಗಿದೆ ಎಂದು ಅಮಿತ್ ಶಾ ತಿಳಿಸಿದರು.
ಪರ್ವತ ಪ್ರದೇಶದಲ್ಲಿ ಅಡಗಿದ್ದ ನಕ್ಸಲರ ಶಿಬಿರಗಳನ್ನು ನಾಶ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಎತ್ತರ ಪ್ರದೇಶವಾದ್ದರಿಂದ ಅತಿಯಾದ ತಾಪಮಾನ ಹಾಗೂ ಐಇಡಿಗಳ ಬೆದರಿಕೆಯ ನಡುವೆಯೂ ನಕ್ಸಲರ ಪ್ರಮುಖ ನೆಲೆಯಾದ ಕಾರೇಗುಟ್ಟವನ್ನು ಭದ್ರತಾ ಪಡೆಗಳು ಯಶಸ್ವಿಯಾಗಿ ನಾಶ ಪಡಿಸಿವೆ ಎಂದು ಹೇಳಿದ್ದಾರೆ.
ದೇಶದಲ್ಲಿ ಕಡಿಮೆ ಅಭಿವೃದ್ಧಿ ಹೊಂದಿದ ಪ್ರದೇಶಗಳ ಮೇಲೆ ನಕ್ಸಲರು ತೀವ್ರ ಹಾನಿಯನ್ನುಂಟುಮಾಡಿದ್ದಾರೆ. ಪ್ರಮುಖ ಮೂಲಸೌಕಾರ್ಯಗಳಾದ ಶಾಲೆ, ಆಸ್ಪತ್ರೆಗಳು ಸೇರಿದಂತೆ ಸರ್ಕಾರಿ ಕಲ್ಯಾಣ ಯೋಜನೆಗಳ ಅಭಿವೃದ್ಧಿಗೆ ಅಡ್ಡಿಪಡಿಸಿದ್ದಾರೆ ಎಂದು ಹೇಳಿದರು.
2026ರ ಮಾರ್ಚ್ ಒಳಗಾಗಿ ಭಾರತವನ್ನು ನಕ್ಸಲ್ ಮುಕ್ತ ದೇಶವನ್ನಾಗಿ ಮಾಡಲು ನಿರ್ಧಾರಿಸಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.