ಲಂಡನ್: ‘ಕೆನಡಾದಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಯ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರ ಕೈವಾಡದ ಬಗ್ಗೆ ಕೆನಡಾ ಮಾಡಿರುವ ಆರೋಪಗಳ ತನಿಖೆಯನ್ನು ಭಾರತ ತಳ್ಳಿಹಾಕುವುದಿಲ್ಲ. ಆದರೆ, ತನ್ನ ಆರೋಪಗಳನ್ನು ಪುಷ್ಟಿಕರಿಸುವಂತಹ ಸಾಕ್ಷ್ಯಾಧಾರಗಳನ್ನು ಆ ದೇಶವು ಒದಗಿಸಬೇಕು’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಬುಧವಾರ ಹೇಳಿದ್ದಾರೆ.
ಬ್ರಿಟನ್ಗೆ ಐದು ದಿನಗಳ ಅಧಿಕೃತ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ಜೈಶಂಕರ್ ಅವರು, ಹಿರಿಯ ಪತ್ರಕರ್ತ ಲಿಯೋನೆಲ್ ಬಾರ್ಬರ್ ಅವರೊಂದಿಗಿನ ‘ಕೋಟ್ಯಂತರ ಜನರು ವಿಶ್ವವನ್ನು ಯಾವ ರೀತಿ ಕಾಣುತ್ತಾರೆ’ ಕುರಿತ ಸಂವಾದದಲ್ಲಿ ಎದುರಾದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
‘ನೀವು ಆ ರೀತಿಯ ಆರೋಪ ಮಾಡಲು ಕಾರಣವಿದ್ದರೆ, ದಯವಿಟ್ಟು ಸಾಕ್ಷ್ಯಗಳನ್ನು ಹಂಚಿಕೊಳ್ಳಿ. ನಾವು ತನಿಖೆ ತಳ್ಳಿಹಾಕುತ್ತಿಲ್ಲ. ಕೆನಡಾ ತನ್ನ ಆರೋಪಗಳನ್ನು ಪುಷ್ಟೀಕರಿಸುವಂತಹ ಯಾವುದೇ ಸಾಕ್ಷ್ಯಗಳನ್ನು ಭಾರತದ ಜತೆಗೆ ಈವರೆಗೆ ಹಂಚಿಕೊಂಡಿಲ್ಲ’ ಎಂದು ಅವರು ಒತ್ತಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.