ಪಟ್ನಾ: ‘ದೇಶ ವಿಭಜನೆಯಾದಾಗ ಇಲ್ಲಿನ ಎಲ್ಲಾ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸದಿರುವುದು ಮತ್ತು ಪಾಕಿಸ್ತಾನದಲ್ಲಿ ಉಳಿದ ಹಿಂದೂಗಳನ್ನು ಭಾರತಕ್ಕೆ ಕರೆತರದಿರುವುದಕ್ಕೆ ಈಗ ಬೆಲೆ ತೆರುತ್ತಿದ್ದೇವೆ’ ಎಂದು ಕೇಂದ್ರದ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ. ಸಚಿವರ ಈ ಹೇಳಿಕೆ ವಿವಾದ ಸೃಷ್ಟಿಸಿದೆ.
ಮುಸ್ಲಿಂ ಸಮುದಾಯದವರೇ ಹೆಚ್ಚಾಗಿರುವ, ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯ (ಸಿಎಎ) ಪರವಾಗಿ ಮಾತನಾಡಿದ ಅವರು, ‘ನಮ್ಮ ಹಿರಿಯರು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸುತ್ತಿದ್ದಾಗ, ಜಿನ್ನಾ ಅವರು ಮುಸ್ಲಿಂ ರಾಷ್ಟ್ರ ನಿರ್ಮಾಣಕ್ಕೆ ಒತ್ತಾಯಿಸುತ್ತಿದ್ದರು. ಆ ಸಂದರ್ಭದಲ್ಲೇ ನಮ್ಮ ಹೋರಾಟಗಾರರು ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಅಲ್ಲಿನ ಹಿಂದೂಗಳನ್ನು ಇಲ್ಲಿಗೆ ಕರೆತರಲು ತೀರ್ಮಾನಿಸಿದ್ದರೆ ಈಗ ಇಂಥ ಕಾಯ್ದೆ ರಚಿಸುವ ಅಗತ್ಯವೇ ಬರುತ್ತಿರಲಿಲ್ಲ. ಅವರು ಮಾಡಿದ ಒಂದು ತಪ್ಪಿಗೆ ನಾವು ಭಾರಿ ಬೆಲೆ ತೆರುತ್ತಿದ್ದೇವೆ’ ಎಂದು ಅವರು ಹೇಳಿದರು.
ಗಿರಿರಾಜ್ ಹೇಳಿಕೆಗೆ ಎನ್ಡಿಎ ಮೈತ್ರಿಕೂಟದಲ್ಲಿರುವ ಎಲ್ಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಬಿಹಾರದಲ್ಲಿ ವಿಧಾನಸಭಾ ಚುನಾ
ವಣೆಯ ಸಿದ್ಧತೆಗಾಗಿ ‘ಬಿಹಾರ ಮೊದಲು–ಬಿಹಾರಿ ಮೊದಲು’ ರ್ಯಾಲಿಯನ್ನು ಆರಂಭಿಸಿರುವ ಎಲ್ಜೆಪಿ ನಾಯಕ ರಾಮ್
ವಿಲಾಸ್ ಪಾಸ್ವಾನ್ ಅವರು, ‘ಬಿಜೆಪಿ ನಾಯಕರ ಇಂಥ ವಿಭಜನಕಾರಿ ಹೇಳಿಕೆಗಳಿಂದಾಗಿಯೇ ದೆಹಲಿ ಚುನಾವಣೆಯಲ್ಲಿ ಎನ್ಡಿಎ ಸೋಲು ಅನುಭವಿಸಬೇಕಾಯಿತು. ಇಂಥ ಹೇಳಿಕೆ ಒಪ್ಪಲಾಗದು. ನಮ್ಮ ಪಕ್ಷದ ಯಾರಾದರೂ ಇಂಥ ಹೇಳಿಕೆ ನೀಡಿದ್ದರೆ ನಾನೇ ಹೊಣೆ ಹೊತ್ತು ಕ್ರಮ ಕೈಗೊಳ್ಳುತ್ತಿದ್ದೆ‘ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.