ನವದೆಹಲಿ: ದೇಶದಾದ್ಯಂತ ಎರಡೇ ಪ್ರಮುಖ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿ ಇರುವಂತಾಗಬೇಕು. ಈ ನಿಟ್ಟಿನಲ್ಲಿ ಸೂಕ್ತ ಕಾನೂನು ರಚಿಸಬೇಕು ಎಂದು ಕರ್ನಾಟಕದ ವಿಜಯಪುರ ಜಿಲ್ಲೆಯ ವ್ಯಕ್ತಿಯೊಬ್ಬರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಚಡಚಣ ತಾಲ್ಲೂಕಿನ ಲೋಣಿ(ಬಿ.ಕೆ)ಗ್ರಾಮದ ಬಾಪೂರಾಯ ಕೂಳಪ್ಪ ಲೋಣಿ ಎಂಬುವವರೇ ಮಾರ್ಚ್ 2ನೇ ವಾರ ತಮ್ಮ ಗ್ರಾಮದಿಂದ ಪಾದಯಾತ್ರೆ ಮೂಲಕ ಹೊರಟು ರಾಷ್ಟ್ರ ರಾಜಧಾನಿ ನವದೆಹಲಿಗೆ ಬಂದಿದ್ದು, ರಕ್ಷಣಾ ಸಚಿವ ರಾಜನಾಥಸಿಂಗ್ ಅವರಿಗೆ ಶುಕ್ರವಾರ ಈ ಕುರಿತ ಮನವಿ ಸಲ್ಲಿಸಿದ್ದಾರೆ.
ಇಂಗ್ಲೆಂಡ್, ಅಮೆರಿಕ ಮತ್ತಿತರ ದೇಶಗಳಲ್ಲಿ ಇರುವಂತೆ ಕೇವಲ ಎರಡು ರಾಜಕೀಯ ಪಕ್ಷಗಳು ಇದ್ದರೆ ಮತದಾರರಲ್ಲಿನ ಗೊಂದಲ ಕಡಿಮೆ ಆಗಲಿದೆ. ಅಲ್ಲದೆ, ಬಹು ಪಕ್ಷಗಳು ಇದ್ದಾಗ ಎದುರಾಗುವ ಅಸ್ಥಿರ ರಾಜಕೀಯ ಸ್ಥಿತಿಯೂ ದೂರವಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಬಹು ಪಕ್ಷ ನೀತಿ ತೊಡೆದು ಹಾಕುವುದರಿಂದ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಅನುಕೂಲ ಆಗಲಿದೆ. ಸೂಕ್ತ ಕಾನೂನು ರಚಿಸುವ ಸಂದರ್ಭ, ಜನೋಪಯೋಗಿ ಯೋಜನೆಗಳ ಜಾರಿಯ ವೇಳೆ ಇದರಿಂದ ಸಹಾಯವಾಗಲಿದೆ ಎಂದೂ ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಬಹು ಪಕ್ಷಗಳಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡುವುದರಿಂದ ಬಹುಮತ ದೊರೆಯದೇ ಅಸ್ಥಿರ ರಾಜಕೀಯ ಸ್ಥಿತಿ ಉಂಟಾಗಿ, ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳಿವೆ. ಇದರಿಂದ ರಾಜಕೀಯ ಮುಖಂಡರಲ್ಲಿನ ಭಿನ್ನಾಭಿಪ್ರಾಯದ ಸಂದರ್ಭ ಸರ್ಕಾರ ಅಸ್ಥಿರತೆಯನ್ನೂ ಎದುರಿಸುವ ಸಂದರ್ಭ ಒದಗಿ, ಅವಧಿಪೂರ್ವ ಚುನಾವಣೆ ಎದುರಿಸಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.