ADVERTISEMENT

ಪಾಕಿಸ್ತಾನ ವಿರುದ್ಧ ಪರೋಕ್ಷ ಯುದ್ಧವನ್ನೂ ಗೆಲ್ಲಲಿದೆ ಭಾರತ: ರಾಜನಾಥ್ ಸಿಂಗ್

ಪಿಟಿಐ
Published 12 ಡಿಸೆಂಬರ್ 2021, 10:08 IST
Last Updated 12 ಡಿಸೆಂಬರ್ 2021, 10:08 IST
ರಾಜನಾಥ್ ಸಿಂಗ್ – ಪಿಟಿಐ ಚಿತ್ರ
ರಾಜನಾಥ್ ಸಿಂಗ್ – ಪಿಟಿಐ ಚಿತ್ರ   

ನವದೆಹಲಿ: ಪಾಕಿಸ್ತಾನದ ವಿರುದ್ಧ 1971ರಲ್ಲಿ ನಡೆದಿದ್ದ ನೇರ ಯುದ್ಧದಲ್ಲಿ ಭಾರತ ಗೆದ್ದಿತ್ತು. ಪ್ರಸ್ತುತ ನಡೆಯುತ್ತಿರುವ ಪರೋಕ್ಷ ಯುದ್ಧದಲ್ಲಿಯೂ ಗೆಲ್ಲಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

1971ರ ಯುದ್ಧದಲ್ಲಿ ಭಾರತದ ಗೆಲುವಿನ ಸ್ವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಭಯೋತ್ಪಾದನೆ ಮತ್ತು ಭಾರತ ವಿರೋಧಿ ಚಟುವಟಿಕೆಗಳಿಗೆ ಪಾಕಿಸ್ತಾನವು ಕುಮ್ಮಕ್ಕು ನೀಡುತ್ತಿದೆ. ಆ ಮೂಲಕ ಭಾರತದಲ್ಲಿ ಒಡಕು ಮೂಡಿಸಲು ಸಂಚು ಹೂಡುತ್ತಿದೆ’ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಎಲ್ಲ ಸಂಚುಗಳನ್ನು ಭಾರತದ ಸಶಸ್ತ್ರ ಪಡೆಗಳು ವಿಫಲಗೊಳಿಸಿದ್ದವು. ಇದೀಗ ಭಯೋತ್ಪಾದನೆಯನ್ನು ಮಟ್ಟಹಾಕಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ರಾವತ್ ನಿಧನದಿಂದ ತುಂಬಲಾರದ ನಷ್ಟ: ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್, ಅವರ ಪತ್ನಿ ಹಾಗೂ ಇತರ ಸೇನಾಧಿಕಾರಿಗಳು ಹುತಾತ್ಮರಾಗಿರುವುದು ದೇಶಕ್ಕೆ ತುಂಬಲಾರದ ನಷ್ಟ ಎಂದು ರಾಜನಾಥ್ ಸಿಂಗ್ ಹೇಳಿದರು.

‘ಇಂದು ಈ ಸಂದರ್ಭದಲ್ಲಿ ಅವರೆಲ್ಲರನ್ನೂ ನಾನು ನೆನಪಿಸಿಕೊಳ್ಳುತ್ತಿದ್ದೇನೆ. ಅವರೆಲ್ಲರಿಗೂ ಗೌರವ ಸಮರ್ಪಿಸುತ್ತಿದ್ದೇನೆ’ ಎಂದು ಸಚಿವರು ಹೇಳಿದ್ದಾರೆ.

ರಾವತ್ ಅವರ ನಿಧನದಿಂದ ಭಾರತವು ಧೀರ ಯೋಧ, ಸಮರ್ಥ ಸೇನಾ ಸಲಹೆಗಾರ ಹಾಗೂ ಅತ್ಯುತ್ತಮ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರು ಸ್ವರ್ಣ ಮಹೋತ್ಸವ ಆಚರಣೆ ಬಗ್ಗೆ ಬಹಳ ಉತ್ಸುಕರಾಗಿದ್ದರು. ಈ ಕಾರ್ಯಕ್ರಮದ ಆಯೋಜನೆಗೆ ಸಂಬಂಧಿಸಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದರು. ಇಂದು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ದುರಂತದಲ್ಲಿ ಬದುಕುಳಿದು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ತಂದೆ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಅವರು ಶೀಘ್ರ ಚೇತರಿಸಿಕೊಂಡು ಮೊದಲಿನಂತಾಗಿ ಕರ್ತವ್ಯಕ್ಕೆ ಮರಳುವಂತಾಗಲಿ ಎಂದು ನಾವೆಲ್ಲ ಪ್ರಾರ್ಥಿಸುತ್ತಿದ್ದೇವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.