ADVERTISEMENT

ಸಮರ್ಥ ಹೋರಾಟದ ಮೂಲಕ ಚೀನಿಯರನ್ನು ಹಿಂದಕ್ಕಟ್ಟಿದ ಭಾರತೀಯ ಯೋಧರು: ರಕ್ಷಣಾ ಸಚಿವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಡಿಸೆಂಬರ್ 2022, 9:40 IST
Last Updated 13 ಡಿಸೆಂಬರ್ 2022, 9:40 IST
   

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಉಲ್ಲಂಘಿಸುವ ಚೀನಾ ಸೈನಿಕರ ಪ್ರಯತ್ನವನ್ನು ಡಿಸೆಂಬರ್ 9 ರಂದು ಭಾರತೀಯ ಯೋದರು ವಿಫಲಗೊಳಿಸಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಸಂಸತ್ತಿಗೆ ತಿಳಿಸಿದರು.

ಸಂಸತ್ತಿನ ಉಭಯ ಸದನಗಳಲ್ಲಿ ರಕ್ಷಣಾ ಸಚಿವರು ಹೇಳಿಕೆಯನ್ನು ಓದಲಾಯಿತು. ‘ ತವಾಂಗ್ ಸೆಕ್ಟರ್‌ನ ಯಾಂಗ್‌ಟ್ಸೆ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಸಮರ್ಥವಾಗಿ ಹೋರಾಡಿದ ಭಾರತದ ಯೋಧರು ಚೀನಾ ಸೈನಿಕರನ್ನು ಹಿಂದಕ್ಕಟ್ಟಿದರು. ಇದರಲ್ಲಿ ಎರಡೂ ಕಡೆಯವರಿಗೂ ಗಾಯಗಳಾಗಿವೆ’ ಎಂದು ಅವರ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯಲ್ಲಿ ಭಾರತದ ಕಡೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಯಾರಿಗೂ ದೊಡ್ಡಮಟ್ಟದ ಗಾಯಗಳಾಗಿಲ್ಲ ಎಂದು ರಾಜನಾಥ್ ಸಿಂಗ್ ಸದನಕ್ಕೆ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಭಾರತೀಯ ಕಮಾಂಡರ್‌ಗಳ ಸಮಯೋಚಿತ ಮಧ್ಯಸ್ಥಿಕೆ ಪರಿಣಾಮವಾಗಿ, ಚೀನಾದ ಪಡೆಗಳು ತಮ್ಮ ನೆಲೆಗಳಿಗೆ ಮರಳಿವೆ ಎಂದು ರಾಜನಾಥ್‌ ಸಿಂಗ್‌ ಮಾಹಿತಿ ಒದಗಿಸಿದ್ದಾರೆ.

ತರುವಾಯ ಡಿಸೆಂಬರ್ 11 ರಂದು ಭಾರತ ಮತ್ತು ಚೀನಾದ ಕಮಾಂಡರ್‌ಗಳ ಶಾಂತಿ ಸಭೆಯನ್ನು ನಡೆಸಲಾಯಿತು. ಚೀನಾದವರು ಇಂತಹ ಕ್ರಮಗಳಿಂದ ದೂರವಿರಬೇಕು ಮತ್ತು ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಬೇಕು ಎಂದು ತಿಳಿಸಲಾಯಿತು. ರಾಜತಾಂತ್ರಿಕ ಮಾರ್ಗದಲ್ಲಿಯೂ ಈ ವಿಷಯವನ್ನು ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ಸೈನಿಕರು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧರಾಗಿದ್ದಾರೆ. ಸಮಗ್ರತೆಗೆ ದಕ್ಕೆ ತರುವ ಯಾವುದೇ ಪ್ರಯತ್ನಗಳನ್ನು ವಿಫಲಗೊಳಿಸಲು ಸಮರ್ಥರಾಗಿದ್ದಾರೆ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ಸೈನಿಕರಿಗೆ ಸದನ ಒಗ್ಗಟ್ಟಾಗಿ ಬೆಂಬಲ ನೀಡುವ ವಿಶ್ವಾಸವಿದೆ ಎಂದೂ ರಾಜನಾಥ್ ಸಿಂಗ್ ಇದೇ ವೇಳೆ ಹೇಳಿದ್ದಾರೆ.

ಅವರ ಹೇಳಿಕೆಯನ್ನು ಓದಿದ ನಂತರ ಲೋಕಸಭೆಯಲ್ಲಿ ಕೋಲಾಹಲ ಉಂಟಾಯಿತು. ಇದಕ್ಕೂ ಮುನ್ನ ರಾಜನಾಥ್ ಸಿಂಗ್ ಅವರು ಉನ್ನತ ಮಟ್ಟದ ತುರ್ತು ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಸಿಡಿಎಸ್ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.