ADVERTISEMENT

ಸುಮ್ಮನಿರಿ ಟ್ರಂಪ್: ಕಾಶ್ಮೀರ ಮಧ್ಯಸ್ಥಿಕೆ ಪ್ರಸ್ತಾವಕ್ಕೆ ಭಾರತ ಸ್ಪಷ್ಟ ನಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಆಗಸ್ಟ್ 2019, 6:43 IST
Last Updated 2 ಆಗಸ್ಟ್ 2019, 6:43 IST
ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಂಕರ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರನ್ನು ಬ್ಯಾಂಕಾಕ್‌ನಲ್ಲಿ ಭೇಟಿಯಾದರು. (ಚಿತ್ರ: twitter.com/DrSJaishankar)
ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಂಕರ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರನ್ನು ಬ್ಯಾಂಕಾಕ್‌ನಲ್ಲಿ ಭೇಟಿಯಾದರು. (ಚಿತ್ರ: twitter.com/DrSJaishankar)   

ಬೆಂಗಳೂರು: ‘ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆಭಾರತವು ಮಾತುಕತೆ ನಡೆಸುವುದಿದ್ದರೆ ಅದು ಪಾಕಿಸ್ತಾನದ ಜೊತೆಗೆ ಮಾತ್ರ. ಮಧ್ಯಸ್ಥಿಕೆಗೆ ಮತ್ತೊಬ್ಬರ ಅಗತ್ಯವಿಲ್ಲ. ಇದು ಭಾರತ ಮತ್ತು ಪಾಕಿಸ್ತಾನಕ್ಕೆ ಮಾತ್ರ ಸಂಬಂಧಿಸಿದ ದ್ವಿಪಕ್ಷೀಯ ವಿಚಾರ’ ಎಂದು ಭಾರತ ಸರ್ಕಾರ ಅಮೆರಿಕಕ್ಕೆ ಮತ್ತೊಮ್ಮೆ ಸ್ಪಷ್ಪಪಡಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ‘ಕಾಶ್ಮೀರ ವಿವಾದ ಪರಿಹಾರಕ್ಕಾಗಿ ಎರಡೂ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ’ ಎಂದು ಶುಕ್ರವಾರ ಮುಂಜಾನೆ ಮತ್ತೊಮ್ಮೆ ಹೇಳಿದ್ದರು. ಟ್ರಂಪ್ ಹೇಳಿಕೆ ಬಹಿರಂಗಗೊಂಡ ಕೆಲವೇ ಗಂಟೆಗಳಲ್ಲಿ ಭಾರತ ತನ್ನ ನಿಲುವನ್ನು ಪುನರುಚ್ಚರಿಸಿದೆ.

ADVERTISEMENT

ಆಸಿಯಾನ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಬ್ಯಾಂಕಾಕ್‌ಗೆ ತೆರಳಿರುವ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಂಕರ್ ಭಾರತ ಸರ್ಕಾರದ ನಿಲುವನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರನ್ನು ಭೇಟಿಯಾಗಿ ‘ಕಾಶ್ಮೀರದ ಬಗ್ಗೆ ಭಾರತವು ಮಾತುಕತೆ ನಡೆಸುವುದಿದ್ದರೆ ಅದು ಪಾಕಿಸ್ತಾನದ ಜೊತೆಗೆ ಮಾತ್ರ’ ಎನ್ನುವ ನಮ್ಮ (ಭಾರತದ) ನಿಲುವನ್ನುಸ್ಪಷ್ಟಪಡಿಸಿದೆ ಎಂದುಟ್ವೀಟ್ ಮಾಡಿದ್ದಾರೆ.

‘ಕಾಶ್ಮೀರ ವಿವಾದ ಕುರಿತ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಹೇಳಿದ್ದರು. ಇದಾದ ಬೆನ್ನಿಗೆ ಭಾರತ ಟ್ರಂಪ್ ಅವರ ಪ್ರಸ್ತಾವವನ್ನು ಸ್ಪಷ್ಟ ಮಾತುಗಳಲ್ಲಿ ನಿರಾಕರಿಸಿತ್ತು. ಶ್ವೇತಭವನದ ಪತ್ರಕರ್ತರೊಬ್ಬರಿಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಮತ್ತೊಮ್ಮೆ ಪ್ರಸ್ತಾಪವಾದಾಗ, ‘ಯಾರಾದರೊಬ್ಬರು ಮಧ್ಯಸ್ಥಿಕೆ ವಹಿಸಬೇಕು ಎಂದು ಅವರು ಬಯಸಿದರೆ ನಾನು ಖಂಡಿತಾ ಸಿದ್ಧನಿದ್ದೇನೆ. ಈ ಬಗ್ಗೆ ಪಾಕಿಸ್ತಾನದ ಜೊತೆಗೆ ಮುಕ್ತವಾಗಿ ಮಾತನಾಡಿದ್ದೇನೆ. ಭಾರತದ ಜೊತೆಗೂ ಮಾತನಾಡುತ್ತೇನೆ’ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದರು.

‘ಕಾಶ್ಮೀರ ವಿವಾದದಲ್ಲಿಮಧ್ಯಸ್ಥಿಕೆ ವಹಿಸುವಂತೆ ಮೋದಿ ಕೋರಿದ್ದಾರೆ’ ಎಂದು ಟ್ರಂಪ್ ಜೂನ್ 22ರಂದು ಹೇಳಿದ್ದರು. ಈ ಹೇಳಿಕೆಯನ್ನು ಭಾರತ ಸಾರಾಸಗಟಾಗಿ ತಳ್ಳಿ ಹಾಕಿತ್ತು. ನಂತರ ಪ್ರತಿಕ್ರಿಯಿಸಿದ್ದ ಅಮೆರಿಕದ ವಿದೇಶಾಂಗ ವ್ಯವಹಾರಗಳ ಖಾತೆ, ‘ಕಾಶ್ಮೀರ ಕುರಿತ ಅಮೆರಿಕ ಸರ್ಕಾರದ ನಿಲುವು ಟ್ರಂಪ್ ಅವರ ವೈಯಕ್ತಿಕ ನಿಲುವಿಗಿಂತ ಭಿನ್ನವಾಗಿದೆ. ಕಾಶ್ಮೀರ ವಿವಾದವನ್ನುಬಗ್ಗೆ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳಬೇಕು’ ಎಂದು ಹೇಳಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.